Sunday 17 July 2011

ಕಲೆ ಒಳ್ಳೆಯದು..!

ಬೇಡ..
ಮುದ್ದೆಯಾಗಿ ಬಿದ್ದುದನ್ನು
ಎತ್ತಿ ಕುಡುಗಿ...
ಅರ್ಧ ಮೇಲೆ ಮಡಿಸಿದ
ಕೈ ಪೂರ್ತಿ ಬಿಡಿಸಿ
ಉಲ್ಟಾ ಮಾಡಿ
ಸಾಬೂನಿನ ಹಾಲ್ನೊರೆ
ನೀರಲ್ಲಿ ದಿನವಿಡೀ ನೆನೆಸಿ
ತಿಕ್ಕಿ ತೊಳೆದು
ನೀರಲ್ಲಿ ಅದ್ದದ್ದಿ ತೆಗೆದು
ಹಿಂಡಿ ತಂತಿ ಮೇಲೆಸೆದು
ಗಾಳಿಗೆ ಹಾರದಂತೆ
ಕ್ಲಿಪ್ಪಿನಿಂದ ಬಂದಿಸುವ ಮೊದಲು
ಒಮ್ಮೆ ಸರಿಯಾಗಿ ನೋಡು...

ನಿನ್ನೆ ರಾತ್ರಿ ನನ್ನನಪ್ಪಿ

ನೀನಿತ್ತ ಮುತ್ತು ಗುರಿ ತಪ್ಪಿ
ಅಂಗಿಯ ಮೇಲೆ
ಕೆಂದುಟಿಯ ಕಲೆ ಮೂಡಿದೆ..

ನೀ ಮತ್ತೆ ಮರಳಿ ಬರುವವರೆಗೆ

ಮುತ್ತ ಹೊತ್ತು ತರುವವರೆಗೆ
ನೋಡಿ ಸಂಭ್ರಮಿಸಬೇಕು ನಾನು...
ನೆನಪ ಮಳೆಯಲಿ ನೆನೆದು
ವಿರಹಾಗ್ನಿ ಸುಡದಂತೆ
ನಿನ್ನ ಕಾಯಬೇಕು ನಾನು..

ಹೊಸ ಅಂಗಿ ಕಲೆಯಾಯ್ತೆಂದು

ಬೇಸರ ಬೇಡ..
ಕಲೆಯಿಂದ ಒಳ್ಳೆಯದಾಗೋದಾದ್ರೆ
ಕಲೆ ಒಳ್ಳೆಯದು..!!

Tuesday 5 July 2011

ನೆನಪಿನ ಯಾತ್ರೆಗೆ

ಅದೋ..
ಇಷ್ಟು ಹೊತ್ತು ಗುಡುಗು ಮಿಂಚಿನ
ಜೊತೆ ತಾಲೀಮು ನಡೆಸಿದ್ದ
ಮಳೆರಾಯ ಬಂದೇ ಬಿಟ್ಟ..
ಚಿಟ ಪಟ.. ಪಟ ಚಿಟ...
ಹನಿಗಳ ಗೆಜ್ಜೆ ನಾದ ಬೇರೆ..
ಮತ್ತು ಮತಿಗೇರಿದಂತೆ
ಕುಣಿದೇ ಬಿಟ್ಟ..

ಆಗಿದ್ದಾಗಲಿ..ಬಿಡಬೇಡ..

ಕತ್ತಿಯಿಂದ ಕಡಿ...
ಹೆರೆಮಣೆಯಲ್ಲಿ ಉದ್ದುದ್ದಗೆ ಸಿಗಿ..
ಕುಡಿವ ಎಣ್ಣೆಯಲ್ಲಿ ಕರಿ..
ಅಚ್ಚ ಖಾರದ ಪುಡಿ ಸ್ವಲ್ಪ ಸೋಕು...
ವ್ಹಾರೆ ವ್ಹಾ...!
ತುಂಬದ ಬಾಯಿಯ ತಿರುಪತಿ ಹುಂಡಿಗೆ..
ಗರಿ ಗರಿ ಹಲಸಿನ ಸಂಡಿಗೆ..

ನೆನಪಿನ ಯಾತ್ರೆಗೆ 
ಮನಸಿನ ಜಾತ್ರೆಗೆ..
ಸಾಕಿಷ್ಟು ತಯಾರಿ..
ಹಾಂ... ಮರೆತೆ.. ಜೊತೆಗೊಂದು ಲೋಟ...
ಬಿಸಿ ಬಿಸಿ ಕಾಫಿ ಬೇಕೇ ಬೇಕು..

Saturday 2 July 2011

ಆ ಬಾಗಿಲುಗಳ ತೆಗೆದುಬಿಡು..!!


 


ಇಷ್ಟದ ಬಣ್ಣವೇನೋ ಹೌದು..
ಆದರೆಷ್ಟು ದಿನ..?
ಜೇಡ ಕಟ್ಟಿದ.. ಬಣ್ಣ ಮಾಸಿದ..
ಅದೇ ನಾಲ್ಕು ಗೋಡೆಯನ್ನು
ತದೇಕಚಿತ್ತದಿಂದ ನೋಡುವುದು...?

ಹಾಡು ಕುಣಿತ ಆಟ ಓಟ
ಅತ್ತೆ ಸೊಸೆ ಕಾದಾಟ
ಸುದ್ದಿ ವಾಹಿನಿಗಳ ದೊಂಬರಾಟ...
ಬದಬದಲಿಸಿ ಚಾನಲ್ಲು
ದೂರದರ್ಶನದೆದುರು ಹೊತ್ತು ದೂಡುವುದು..?

ಹೊರಗೆ ಗ್ಯಾಲರಿಯಲ್ಲಿ
ವಿಂಡ್ ಚೈಮ್ ನುಡಿಸುತಿರುವ
ತಣ್ಣನೆಯ ಗಾಳಿ ಒಳ ತೂರಬಹುದು...
ಕವಿದ ಮಬ್ಬು ಸರಿಯುವಂತೆ
ಸೂರ್ಯನ ಪುಗಸಟ್ಟೆ ಬೆಳಕು ಒಳ ಚಿಮ್ಮಬಹುದು...
ದಾರಿಯಲ್ಲಿ ಹೋಗುವ ವಾಹನಗಳ ಸದ್ದು
ಪಾರ್ಕಿನಲ್ಲಿ ನಲಿವ ಮಕ್ಕಳ ಕೇಕೆ
ಕಿವಿಗೆ ಅಪ್ಪಳಿಸಲೂ ಬಹುದು..
ರಾತ್ರಿಯ ಸಿ ಎಫ್ ಎಲ್ ಬೆಳಕಿನ ಮೋಹದಿ
ಒಂದೆರಡು ಹುಳ ಹಪ್ಪಡೆ ಹಾರಿ ಬರಬಹುದು..
 ಮೊದಲ ಮಳೆಗೆ ಹರಡಿದ ಮಣ್ಣಿನ ಕಂಪು
ಮೂಗಿಗೆ ಬಡಿದರೂ ಆಶ್ಚರ್ಯವಿಲ್ಲ..
ಮತ್ತೆ ಯೋಚನೆ ಬೇಡ...ಆಗಿದ್ದಾಗಲಿ.. 
ಆ ಕಿಡಕಿಯ ಎರಡು ಬಾಗಿಲುಗಳನ್ನು ತೆಗೆದುಬಿಡು...

Wednesday 27 April 2011

ಕಣ್ಣೀರ ಕಡಲು...!!



ನಿಲ್ಲುವ ಮಾತೇ ಇಲ್ಲ...
ಒಂದೇ ಸಮನೆ
ಧೋ..ಎಂದು ಸುರಿಯುತ್ತಿದೆ.. ಮಳೆ...
ಸುತ್ತಲೂ ಕತ್ತಲು... ಕಣ್ಣೀರ ಕಡಲು...

ಎಲ್ಲದಕ್ಕು ಕಾರಣ ಆ ಚಂದ್ರಮ...
ಪ್ರತಿ ಸಾರಿಯಂತೆ ನಿನ್ನೆ ಮತ್ತೆ...
ಪೌರ್ಣಮಿಯ ನೆವವೊಡ್ಡಿ..
ಲಲನೆಯರ ಸೆಳೆವ ತೆವಲು ಹೆಚ್ಚಿ
ಸೂರ್ಯನಿಂದ ಒಂದಿಷ್ಟು ಬೆಳಕು
ಕಡ ತಂದು ಮಿರ್ರನೆ ಮಿಂಚುತ್ತಿದ್ದ..

ಏನನಿಸಿತೋ ನನ್ನ ನೋಡಿ...
 ಒಮ್ಮೆ ತನ್ನತ್ತ ಸೆಳೆದ...
ಗೆಳೆಯಾ.. ಎನ್ನುತ್ತಾ ಮಾತಿಗೆಳೆದ...

ವಿರಹ.. ದುಃಖ.. ಏಕಾಂತ.. ಬೇಸರ...
ಎಲ್ಲ ತೋಡಿಕೊಂಡೆ.. 
ಪರಿಹರಿಸು ಗೆಳೆಯಾ..
ಪರಿ ಪರಿಯಾಗಿ ಬೇಡಿಕೊಂಡೆ..

ಪಾಪಿ.. ನನ್ನ ಕಥೆಯ 
ಹೋಗಿ ಹೋಗಿ ಮೋಡಗಳಿಗೆ ಹೇಳುವದೆ...??

ನಿಲ್ಲುವ ಮಾತೇ ಇಲ್ಲ...
ಒಂದೇ ಸಮನೆ ಸುರಿಸುತಿವೆ....
ಸುತ್ತೆಲ್ಲ ಕತ್ತಲು.. ಕಣ್ಣೀರ ಕಡಲು...

Saturday 23 April 2011

ಮೂರು ಹನಿ...!!

~ ೧ ~ 


ಸ್ವಾರ್ಥಿಗಳ ಲೋಕವಿದು
ಗೆಳೆಯಾ..ಜನರೆದುರು 
ಕಣ್ಣೀರ ಸುರಿಸದಿರು.. ಅದು ತಪ್ಪು...

ಮನದ ಗಾಯಗಳ
ತಪ್ಪಿಯೂ ತೋರದಿರು..
ಎಲ್ಲ ಕೈಯ್ಯಲ್ಲಿ ಹಿಡಿದಿಹರು ಉಪ್ಪು...!!


~ ೨ ~


ಕಾಡದಿರಿ ನೆನಪುಗಳೇ ಇಂದು..
ಜಗದ ಮೆರವಣಿಗೆಯಲಿ
ನಾನು ಸಹ ಒಂದಾಗಿ ಸಾಗ ಬೇಕು

ಜಿನುಗುವಾ ಕಣ್ಣೀರ
ಮರೆಸಿ ನಾ ಮರೆಯಲ್ಲಿ
ಸುಮ್ಮನೆ ಸುಳ್ಳು ನಗೆ ನಗ ಬೇಕು..!



~ ೩ ~


ಬಂಧನದ ಭಯವಿರದೆ
ದಣಿಯದೇ ಕುಣಿಯುತಿಹೆ
ನೋಡಿ ನರ್ತನದಾ ಹೆಜ್ಜೆ..

ಬೆಸೆದು ಬೀಗಿಹನು ಕಾಲ
ಕಾಲ್ಗಳಲಿ ಸರಪಳಿಯ..
ನನಗದುವೆ ಬಣ್ಣದಾ ಗೆಜ್ಜೆ..!!

Thursday 7 April 2011

ಇದು ಕನ್ನಡಿಗರ ಹಾಡು..!!

ಹೆಚ್. ಎಸ್. ವೆಂಕಟೇಶಮೂರ್ತಿ ವಿರಚಿತ, ಪ್ರವೀಣ್ ಕುಮಾರ್ ಸಂಗೀತ ನಿರ್ದೇಶನದ, ಕನ್ನಡದ ಹೆಸರಾಂತ ಹಲವು ದಿಗ್ಗಜರು ಹಾಡಿದ ಹಾಡಿಗೆ ನನ್ನ ಪ್ರಿಯ ಮಿತ್ರ ವಿನಯ್ ಭಟ್ ಅತ್ಯಂತ ಸುಂದರವಾದ ವೀಡಿಯೊ ಮಾಡಿದ್ದಾರೆ.. ಕೇಳಿ.. ನೋಡಿ.. ಆನಂದಿಸಿ... ಹೇಗಿದೆ ಅಂತ ಹೇಳಿ.. 


Saturday 26 February 2011

ಎರಡು ಹನಿ..!

ವಜ್ರ (ಮುನಿ) Money

ಮಡದಿಗೆ ಕೊಟ್ಟಷ್ಟೂ
ಸಾಲದಂತೆ
ವಜ್ರ ಮತ್ತು Money..
ಪಾಪ..
ಅದಕ್ಕೇ ನಮ್ಮ ರಾಯರು
ಕಚೇರಿಯ ಸಿಬ್ಬಂದಿಗಳ
ಪಾಲಿಗೆ "ವಜ್ರಮುನಿ"..!!


ಮುಟ್ಟಿದರೆ Money

ಮದುವೆಗೆ ಮೊದಲು
ಪ್ರತಿ ಸ್ಪರ್ಶಕೂ ನುಲಿದು ನಲಿದು
ನಾಚಿ ನೀರಾಗುತಿದ್ಲು ಚೆಲುವೆ
ಸಾಕ್ಷಾತ್ ಮುಟ್ಟಿದರೆ ಮುನಿ....!
ಈಗ ಮುಟ್ಟುವದಾದರೆ
ಕೊಡಲೇ ಬೇಕಂತೆ
ಒಂದು ಮೂಟೆ Money..!

Saturday 12 February 2011

ದೊಡ್ಡ ಕನಸುಗಳಿಗೆ ಚಿಲ್ಲರೆ ಬೇಕಿದೆ..!!

ಅದೋ ಅಲ್ಲಿ ಮೂಲೆಯಲ್ಲಿ
ಧೂಳು ಹತ್ತಿ ಬಿದ್ದಿದೆಯಲ್ಲ...
ನಾನು ಹುಟ್ಟಿದಾಗಿನಿಂದ
ಕಟ್ಟಿದ ದೊಡ್ಡ ದೊಡ್ಡ ಕನಸುಗಳ ಮೂಟೆ...

ಅಂದುಕೊಂಡಿದ್ದು ಇಷ್ಟೇ..
ಒಂದು ದಿನ ದೊಡ್ಡ ಖುಷಿಯ ಖರೀದಿಸಬೇಕು
ಈ ಕೂಡಿಟ್ಟ ಕನಸುಗಳ ಬಿಂದಾಸ್ ಉಡಾಯಿಸಬೇಕು..!

ಎಷ್ಟೋ ವರ್ಷಗಳಿಂದ ಕೂಡಿಟ್ಟ ಕನಸುಗಳವು
ಸಾವಿರ ಸಾವಿರ ರುಪಾಯಿಯ ನೋಟಿನಂತವು
ಚಿಲ್ಲರೆಯಾದರೆ ಚಿಕ್ಕ ಚಿಕ್ಕ ಖುಷಿಯ
ಖರೀದಿಗೇ ಖಾಲಿಯಾದೀತೆಂಬ ಭಯ...

ಅದೆಷ್ಟೋ ಮಂದಿ ನನ್ನವರು
ನನ್ನ ಆಪ್ತರು, ನನ್ನ ಪರಿಚಯದವರು
ಕನಸುಗಳ ಸಾಲ ಕೇಳಿದರು
ಪ್ರತಿ ಸಾರಿಯೂ ನನ್ನ ಉತ್ತರ ಒಂದೇ ..
"ಇಲ್ಲ.. ದೂರವಾಗಿ ನನ್ನಿಂದ..
ದೊಡ್ಡ ಖುಷಿಯ ಖರೀದಿ ಮಾಡ ಬೇಕಿದೆ ನಾನು..
ನಿಮಗಾಗಿ ಒಂದು ಕನಸೂ ಇಲ್ಲ.. "

ಅದೆಷ್ಟೋ ಬಾರಿ..
ದಾರಿ ಬದಲಿಸಿ ತಿರುಗಿಹೆನೋ ಗೊತ್ತಿಲ್ಲ..
ಅಲ್ಲೆಲ್ಲಾದರೂ ಸಾಲ ಕೇಳುವವರು ಇರಬಹುದೆಂಬ ಶಂಕೆ..
ಅನುಕ್ಷಣ ಮನದಲ್ಲಿ ದೊಡ್ಡ ಖುಷಿಯ ಮಾಯಾ ಜಿಂಕೆ..

ಈಗ... ಇಷ್ಟು ವರ್ಷದ ನಂತರ..
ಪರಿಸ್ಥಿತಿಯ ಕೈ ಗೊಂಬೆಯಾಗಿ
ಕುಣಿದು ದಣಿದ ನಂತರ ಅರಿವಾಗಿದೆ...
ಚಿಕ್ಕ ಚಿಕ್ಕ ಖುಷಿಯಿಂದಲೇ ದೊಡ್ಡ ಖುಷಿ ಸಿಗುವುದಂತೆ..!!

ಇಂದು ಆಸೆಯಾಗುತ್ತಿದೆ..
ನನ್ನೆಲ್ಲ ದೊಡ್ಡ ಕನಸುಗಳ ಮೂಟೆಯನ್ನು ಖಾಲಿ ಮಾಡಬೇಕು..
ಎಲ್ಲ ಚಿಕ್ಕ ಚಿಕ್ಕ ಖುಶಿಗಳನ್ನು ದೊಚಬೇಕು..
ಬಾಚಿ ಎದೆಗವಚಿಕೊಳ್ಳಬೇಕು...

ಆದರೆ ಯಾರ ಬಳಿಯೂ ನನ್ನ ಸಾವಿರ ಸಾವಿರ ರುಪಾಯಿಯ
ನೋಟಿನಂತಹ ದೊಡ್ಡ ಕನಸುಗಳಿಗೆ ಚಿಲ್ಲರೆ ಇಲ್ಲವಂತೆ...!!

(ಹಿಂದೆಲ್ಲೋ ಓದಿದ ಹಿಂದಿ ಕವಿತೆಯೊಂದರಿಂದ ಪ್ರಭಾವಿತ)