Showing posts with label ಕನ್ನಡ. Show all posts
Showing posts with label ಕನ್ನಡ. Show all posts

Thursday, 26 September 2019

ನೆರಳು



ನೆರಳಿನ ಬಗ್ಗೆ ಮೂರು ಚುಟುಕಗಳು

*****************************************

ವಿಷದ ನೆರಳು ವಿಷವನ್ನೆ ಹಡೆವುದು
ಖುಷಿಯ ನೆರಳು ಖುಷಿಯನ್ನೆ ಹೆರುವುದು
ದೋಷ ನೆರಳಿನದಲ್ಲ, ಅದು ಬರಿಯ ಛಾಯೆ
ಶೇಷ ನೆರಳಿನ ಮೂಲ ಆಕೃತಿಯ ಮಾಯೆ!!

****************************************

ನಡೆದರೆ ಜೊತೆ ನಡೆಯುವದು ನೆರಳು
ನಿಂತರೆ ಜೊತೆ ನಿಲ್ಲುವದು ನೆರಳು
ಬರಿದೆ ಭಯವೇಕೆ ನೆರಳಲ್ಲ ಗುಮ್ಮ
ಅದು, ಬಿಡದೆ ಬೆನ್ನಿಗೆ ನಿಂತಿರುವ ಅಮ್ಮ!!

****************************************

ತೊಗಲು ಕಪ್ಪಾದರೂ ಕೊರಳಿನಿಂಪು ಕಪ್ಪಲ್ಲ
ಹಸುವು ಕಪ್ಪಾದರೂ ಹಾಲಿನೊಸಗೆ ಕಪ್ಪಲ್ಲ
ಬಣ್ಣದಲಿ ಏನಿಲ್ಲ, ಅದು ಮಾಯೆ ಮರೆಯದಿರು
ನೆರಳು ಕಪ್ಪಾದರೂ ನೆರಳೀವ ತಂಪು ಕಪ್ಪಲ್ಲ!!

****************************************

✒ ದಿಲೀಪ್ ಹೆಗಡೆ

Sunday, 15 September 2019

ನೆನಪುಗಳ ಮೂಟೆ






ಬಾರಾ ಪ್ರಿಯಸೋದರ ಜೊತೆ ನಾವು ಪೇರಿಸುವ
ಮನದ ಗೋದಾಮಿನಲಿ ನೆನಪುಗಳ ಮೂಟೆ
ಬಾನ ಎಲ್ಲೆಯ ಮೀರಿ ಜೊತೆ ಸೇರಿ ಏರಿಸುವ
ಒಲವ ಅಡಿಪಾಯದ ಮೇಲೆ ಕನಸುಗಳ ಕೋಟೆ

ಸವೆಸೋಣ ಬಾ ಜೊತೆಗೆ ಕೈಯಲ್ಲಿ ಕೈ ಹಿಡಿದು
ತೋಟದಾಚೆಯ ದಟ್ಟ ಕಾನನದ ಹಾದಿ
ಸವಿಯೋಣ ಬಾ ಜೊತೆಗೆ ಬೆಟ್ಟದಾ ಹಣ್ಣುಗಳ
ಕಾಡುಗಿಡ ಪೊದೆಗಳನು ನಾವು ಜಾಲಾಡಿ

ನೇರಳೆ ನುರುಕಲು ಪರ್ಗೆ ಹುಳಿ ಕೌಳಿಕಾಯಿ
ಪೇರಲೆ ಮುರುಗಲು ಜಂಬೆ ಆಹಾ ನೆಲ್ಲಿಕಾಯಿ
ಸಂಪಿಗೆ ಪನ್ನೇರಲು ಜೊತೆ ಹೊಳೆದಾಸವಾಳ
ಗೇರು ರಂಜಲು ಹುಲಿಗೆ ಮುಳ್ಳಣ್ಣಿನ ಮೇಳ

ಅಜ್ಜಿಯ ಕಥೆ ಕೇಳುತ ಸುಖನಿದಿರೆಗೆ ಜಾರೋಣ
ಅಮ್ಮನ ಮುದ್ದಿಗೆ ಸೋತು ಮಡಿಲನು ಏರೋಣ
ಕದ್ದೊಮ್ಮೆ ನೋಡುವ ಬಾ ಅಜ್ಜನ ಸಂದೂಕ
ಚೌತಿಗೆ ತರುವನು ಅಪ್ಪ ರೀಲಿನ ಬಂದೂಕ

ಹೊಳೆಯಾ ನೀರಲಿ ನಾವು ಈಜುವ ಮೀನಂತೆ
ತೊಳೆಯ ಹಲಸಿನ ಜೊತೆಗೆ ಸಿಹಿಯಾ ಜೇನಂತೆ
ಬರೆದಿಡುವ ಚಂದ್ರಮನಾ ಎಡೆಗೊಂದು ಏಣಿ
ಹರಿಬಿಡುವ ಮಳೆ ನೀರಿನಲಿ ಕಾಗದದ ದೋಣಿ

ಆಗಸದಿ ಹಾರಿಸುವ ಬಾರೋ ಬಣ್ಣದ ಗಾಳಿಪಟ
ಜೊತೆಜೊತೆಗೆ ಕಲಿಯೋಣ ಖುಷಿ ಜೀವನದ ಪಾಠ
ಎಂದೆಂದಿಗೂ ಚಿರವಾಗಲಿ ನಮ್ಮಯ ಈ ಪ್ರೀತಿ
ನಾ ನಿನಗೆ ನೀ ನನಗೆ ಇರೆ ಇನ್ಯಾರ ಭೀತಿ.?

ಬಾರಾ ಪ್ರಿಯಸೋದರ ಜೊತೆ ನಾವು ಪೇರಿಸುವ
ಮನದ ಗೋದಾಮಿನಲಿ ನೆನಪುಗಳ ಮೂಟೆ
ನಗುವ ತೋಟದ ಚೆಲುವ ಕುಡಿಗಳು ನಾವು
ಕಟ್ಟೋಣ ಜೊತೆ ಸೇರಿ ಕನಸುಗಳ ಕೋಟೆ

Thursday, 12 September 2019

ವಯೋಧರ್ಮ



ಬಾಗಿಬಳಲಿದ ದೇಹ 
ಸುರುಟಿದೊಣ ಚರ್ಮ...
ಮಸುಪು ಕಣ್ಣಿನ ನೋಟ
ತೊದಲು ವಯೋಧರ್ಮ!

ಮಂದ ಕಿವಿಯಾಲಿಕೆಯು
ಕಂಪಿಸುವ ಕೈಯಿ...
ಕೃತಕ‌ದಂತದ ಕವಚ
ಠಂಕಿಸಿದ ಬಾಯಿ!

ಮಾಗಿದೆನ್ನಯ ಬಾಳು
ಪರಿಪೂರ್ಣ ಗ್ರಂಥ
ಕನ್ನಡಿಯ ಹೊರಗಿನ್ನೂ
ನಾನು ಜೀವಂತ!

ಹಾಲುಬಿಳುಪಿನ ದೇಹ
ಹೊಳೆವ ಮೈಕಾಂತಿ..
ಮೊನಚುಗಣ್ಣಿನ ನೋಟ
ಮಾತಿನಲಿ ಛಾತಿ!

ಮಿನುಗುಮುತ್ತಿನ ದಂತ
ಅಪ್ಸರೆಯ ಉಡುಗೆ..
ನವಿಲನಾಟ್ಯಕು ಚಂದ
ಮೇನಕೆಯ ನಡುಗೆ!

ಬಾಳಪುಟಗಳ ಬರೆವ
ಆಸೆ ದಾವಂತ..
ಕನ್ನಡಿಯ ಒಳಗಿನ್ನೂ
ನಾನು ಶ್ರೀಮಂತ..!!

ಕ್ಷಣದ ಕೋಪ


ಹರಿದ ಹಾಳೆ, ಒಡೆದ ಗಾಜು 
ಮರಳಿ ಒಂದುಗೂಡದು
ಕ್ಷಣದ ಕೋಪದಿಂದ ಮುರಿದ 
ಮನಸು ಮತ್ತೆ ಸೇರದು..!

ಹರಿವ ಹೊಳೆ ಪ್ರವಾಹವಾಗೆ 
ಬಾಳಿಗಿಹುದೆ ಆಸರೆ...?
ಸಿಟ್ಟ ನೆರೆಗೆ ಕೊಚ್ಚಿಹೋದ
ಪ್ರೀತಿ ತಿರುಗಿ ಬಾರದು..!

ಹರಿತ ಮಾತು, ಮುನಿಸ ಮೌನ 
ಈಟಿಯಂತೆ ಇರಿಯಲು
ಕೋಪ ಕೊರೆದ ಮನದಗಾಯ
ಸಹಜವಾಗಿ ಆರದು..!

ಪ್ರೀತಿ ಜನರ ನಡುವೆ ಕೆಸರ
ಎರಚೆ ಕ್ಷಣದ ಕೋಪವು
ಕೆಡುವ ನಂಟು ಕೊಚ್ಚೆಯಂತೆ 
ಅಪ್ಪಿಕೊಳಲು ಆಗದು..!

ಕೃತಜ್ಞತೆ!



ತೆರೆಯಮರೆಯಲಿ
ತರಳುತರುವಿನತೆರದಿ
ಪೊರೆವ ಜನನಿಯ ಋಣವ
ತೆರಲಿಹುದೆ ಎಣೆಯು

ಗುರಿಯನರುಹಿದ
ಗುರುಹಿರಿಯರನವರತ
ಗುರುತಿನಲಿ ನಮಿಸುವದು
ಗುರುತರದ ಹೊಣೆಯು

ಉಮೆಯ ಒಡೆಯನ
ರಮೆಯ ರಮಣನ ಹರಕೆ
ವಿಮೆಯಿರಲು ಇರುವಿನಲಿ
ರಮ ಮನದ ಮನೆಯು

ಅವನಿಯುಸಿರನು
ನೆವವಿರದೆ ನೆರವಿಗಿಡೆ
ನವಿರು ಬದುಕಿನ ಪಥವು
ಬವಣೆಗಳ ಕೊನೆಯು

ಅರಿಯದನುದಿನ
ಇರಿವ ನುಡಿಯನು ನುಡಿವ
ಅರಿಗಳಿಗೊಳಿತಿನೊಸಗೆ
ಹರಸುವದೆ ಕಣೆಯು



ತರಳುತರು = ತೆಂಗಿನಮರ, ಕಲ್ಪ ವೃಕ್ಷ
ಒಸಗೆ = ಉಡುಗೊರೆ
ರಮ = ಸಂತೋಷದಾಯಕವಾದುದು
ಕಣೆ = ಬಾಣ ( ಇಲ್ಲಿ ಪ್ರತೀಕಾರ ಎಂಬ ಅರ್ಥದಲ್ಲಿ ಬಳಸಿದ್ದೇನೆ)






ನಲಿವ ಹಿಂದಿನ ನೋವು



ಹೊಸ ಚಿಗುರುಗಳದೋ ಬೆಡಗು ಬಿನ್ನಾಣ ರಸಕೇಳಿ
ಚಿಗುರೊಡೆವ ನೋವ ಹಳೆಯ ಕೊಂಬೆಗಳಿಗೆ ಕೇಳಿ

ಪತಂಗಗಳದೋ ಬೆಳಕ ನೋಡುತ ಮೈಮರೆತ ಕುಣಿತ
ಉರಿದುರಿದು ಬೆಳಗುವ ಉರಿಯ ದೀಪಗಳಿಗೆ ಕೇಳಿ

ಮುಡಿಗೆ ಹೂ ಮುಡಿದು ಮುದದಿ ಮೆರೆವಳು ಲಲನೆ
ಬೆವರುಣಿಸಿ ಹೂ ಬೆಳೆವ ಗುಟ್ಟ ಮಾಲಿಯನು ಕೇಳಿ

ಕವಿಪುಂಗವರಿಗೆ ಸ್ಫೂರ್ತಿ ಸೆಲೆಯಂತೆ ಶಿಲಾಬಾಲಿಕೆ
ಉಳಿಯ ಪೆಟ್ಟಿನ ನೋವ ಕಡೆದ ಶಿಲೆಗಳಿಗೆ ಕೇಳಿ

ರೆಕ್ಕೆ ಬಲಿತು ಬಾನೆತ್ತರ ಜಿಗಿವ ಮರಿಗಳದದೇನು ಅಂದ
ಹೊಟ್ಟೆಕಟ್ಟಿ ಮೊಟ್ಟೆಕಾಯ್ವ ಬವಣೆ ಹಿರಿಹಕ್ಕಿಯ ಕೇಳಿ

ಆಸ್ತಿ ಅಂತಸ್ತಿನ ಮದದಿ ಮೆರೆವುದೇ ಸಾಧನೆಯೇ..?
ಕರುಳಕುಡಿಗಾಗಿ ತೊರೆದ ಆಸೆಗಳೇನೆಂದು ಹೆತ್ತವರ ಕೇಳಿ

Saturday, 27 July 2019

ನಿರುಪಯೋಗಿ ಕವಿತೆಗಳು

ಬರದಿ ಬಿರಿದ ಬರಡು ಭೂಮಿ ಮೇಲಣ ಅಂಬರ 
ಕನಿಕರದ ಕಂಬನಿ ಸುರಿಸುವದಿಲ್ಲ..
ಹಸಿರ ‌ಹೆಸರು ಮರೆತ ಮರದ ರೆಂಬೆಗಳಲ್ಲಿ
ಹೊಸ ಚೈತ್ರದ ಚಿಗುರು ಕುಡಿಯೊಡೆಯುವದಿಲ್ಲ..
ಈ ಹಾಳು ಕವಿತೆಗಳಿಂದ ಏನೂ ಆಗುವದಿಲ್ಲ...

ಚೆಲ್ಲಿದರು ತರ್ಪಣಕೆ ಎದೆ ಬಗೆದು ನೆತ್ತರನು
ಕಲ್ಲು ದೇವರು ಕಣ್ಣ ತೆರೆಯುವದೆ ಇಲ್ಲ
ಕಣ್ಣುಗಳಲಿ ನೀರ್ಬತ್ತಿ ಹರಿದರೂ ಹನಿ ರಕ್ತವದು
ಮಣ್ಣು ಸೇರಿದ ಪ್ರೀತಿ ಮಾತನಾಡುವದೆ ಇಲ್ಲ...
ಈ ಹಾಳು ಕವಿತೆಗಳಿಂದ ಏನೂ ಆಗುವದಿಲ್ಲ...

ಉಸಿರು ನಿಲ್ಲುವವರೆಗೆ ಗೆಯ್ದರೂ ಕಾಯಕವ
ಹಸಿದ ಹೊಟ್ಟೆಗೆ ಹಿಟ್ಟು ಹುಟ್ಟುವದೆ ಇಲ್ಲ
ಎಡೆಬಿಡದೆ ಎಡೆಎಡೆಯಲಿ ಗುಗ್ಗಳವ ಸುರಿದರೂ
ಒಡೆದ ಕನ್ನಡಿ ಹರಳು ಕೂಡುವದೆ ಇಲ್ಲ
ಈ ಹಾಳು ಕವಿತೆಗಳಿಂದ ಏನೂ ಆಗುವದಿಲ್ಲ..

Wednesday, 9 October 2013

ದಾರಿಗಳು ಮಾತನಾಡುವುದಿಲ್ಲ...!!


ಏರು ತಗ್ಗು, ತಿರುವು ಮುರುವು
ನಿಲ್ಲಲೊಲ್ಲದ ನಿರಂತರ ಹರಿವು... 
ಊರಿಂದೂರಿಗೆ ನಂಟು 
ಬೆಸೆಯುವ ದಾರಿಗಳು 
ಬದಲಿಗೆ ಗಂಟು ಕೇಳುವುದಿಲ್ಲ... 

ಮಂದಿರಕೊ.. ಮಸಣಕೋ..
ನಾಡಿಗೊ... ಕಾಡಿಗೊ..
ಕರೆದೊಯ್ವ ದಾರಿಗಳು.. 
ಬಿದ್ದಲ್ಲೇ ಬಿದ್ದಿರುತ್ತವೆ ಹೊರತೂ... 
ಖುದ್ದು ನಡೆಯುವುದಿಲ್ಲ ...

ಹೀಗೆ ನಡೆದರೆ ಸ್ವರ್ಗ 
ಹಾಗೆ ಹಾದರೆ ನರಕ 
ಆಯ್ಕೆ ಮಾತ್ರ ಹೋಕರದೆ... 
ಅಪ್ಪಿತಪ್ಪಿಯೂ ದಾರಿಗಳು 
ಆಜ್ಞೆಗಳ ಉಸಿರುವುದಿಲ್ಲ... 

ಊರ ಎದೆಯನು ಸಿಗಿದು 
ಬಿಡದೆ ಬೆಟ್ಟವನೂ ಬಗೆದು 
ಅಭಿವೃದ್ದಿಯ ಅಂಧ ಓಟಕ್ಕೆ 
ಮೂಖ ಸಾಕ್ಷಿ ದಾರಿಗಳು
ಮರೆತೂ ಮಾತನಾಡುವುದಿಲ್ಲ... 


Sunday, 17 July 2011

ಕಲೆ ಒಳ್ಳೆಯದು..!

ಬೇಡ..
ಮುದ್ದೆಯಾಗಿ ಬಿದ್ದುದನ್ನು
ಎತ್ತಿ ಕುಡುಗಿ...
ಅರ್ಧ ಮೇಲೆ ಮಡಿಸಿದ
ಕೈ ಪೂರ್ತಿ ಬಿಡಿಸಿ
ಉಲ್ಟಾ ಮಾಡಿ
ಸಾಬೂನಿನ ಹಾಲ್ನೊರೆ
ನೀರಲ್ಲಿ ದಿನವಿಡೀ ನೆನೆಸಿ
ತಿಕ್ಕಿ ತೊಳೆದು
ನೀರಲ್ಲಿ ಅದ್ದದ್ದಿ ತೆಗೆದು
ಹಿಂಡಿ ತಂತಿ ಮೇಲೆಸೆದು
ಗಾಳಿಗೆ ಹಾರದಂತೆ
ಕ್ಲಿಪ್ಪಿನಿಂದ ಬಂದಿಸುವ ಮೊದಲು
ಒಮ್ಮೆ ಸರಿಯಾಗಿ ನೋಡು...

ನಿನ್ನೆ ರಾತ್ರಿ ನನ್ನನಪ್ಪಿ

ನೀನಿತ್ತ ಮುತ್ತು ಗುರಿ ತಪ್ಪಿ
ಅಂಗಿಯ ಮೇಲೆ
ಕೆಂದುಟಿಯ ಕಲೆ ಮೂಡಿದೆ..

ನೀ ಮತ್ತೆ ಮರಳಿ ಬರುವವರೆಗೆ

ಮುತ್ತ ಹೊತ್ತು ತರುವವರೆಗೆ
ನೋಡಿ ಸಂಭ್ರಮಿಸಬೇಕು ನಾನು...
ನೆನಪ ಮಳೆಯಲಿ ನೆನೆದು
ವಿರಹಾಗ್ನಿ ಸುಡದಂತೆ
ನಿನ್ನ ಕಾಯಬೇಕು ನಾನು..

ಹೊಸ ಅಂಗಿ ಕಲೆಯಾಯ್ತೆಂದು

ಬೇಸರ ಬೇಡ..
ಕಲೆಯಿಂದ ಒಳ್ಳೆಯದಾಗೋದಾದ್ರೆ
ಕಲೆ ಒಳ್ಳೆಯದು..!!

Wednesday, 27 April 2011

ಕಣ್ಣೀರ ಕಡಲು...!!



ನಿಲ್ಲುವ ಮಾತೇ ಇಲ್ಲ...
ಒಂದೇ ಸಮನೆ
ಧೋ..ಎಂದು ಸುರಿಯುತ್ತಿದೆ.. ಮಳೆ...
ಸುತ್ತಲೂ ಕತ್ತಲು... ಕಣ್ಣೀರ ಕಡಲು...

ಎಲ್ಲದಕ್ಕು ಕಾರಣ ಆ ಚಂದ್ರಮ...
ಪ್ರತಿ ಸಾರಿಯಂತೆ ನಿನ್ನೆ ಮತ್ತೆ...
ಪೌರ್ಣಮಿಯ ನೆವವೊಡ್ಡಿ..
ಲಲನೆಯರ ಸೆಳೆವ ತೆವಲು ಹೆಚ್ಚಿ
ಸೂರ್ಯನಿಂದ ಒಂದಿಷ್ಟು ಬೆಳಕು
ಕಡ ತಂದು ಮಿರ್ರನೆ ಮಿಂಚುತ್ತಿದ್ದ..

ಏನನಿಸಿತೋ ನನ್ನ ನೋಡಿ...
 ಒಮ್ಮೆ ತನ್ನತ್ತ ಸೆಳೆದ...
ಗೆಳೆಯಾ.. ಎನ್ನುತ್ತಾ ಮಾತಿಗೆಳೆದ...

ವಿರಹ.. ದುಃಖ.. ಏಕಾಂತ.. ಬೇಸರ...
ಎಲ್ಲ ತೋಡಿಕೊಂಡೆ.. 
ಪರಿಹರಿಸು ಗೆಳೆಯಾ..
ಪರಿ ಪರಿಯಾಗಿ ಬೇಡಿಕೊಂಡೆ..

ಪಾಪಿ.. ನನ್ನ ಕಥೆಯ 
ಹೋಗಿ ಹೋಗಿ ಮೋಡಗಳಿಗೆ ಹೇಳುವದೆ...??

ನಿಲ್ಲುವ ಮಾತೇ ಇಲ್ಲ...
ಒಂದೇ ಸಮನೆ ಸುರಿಸುತಿವೆ....
ಸುತ್ತೆಲ್ಲ ಕತ್ತಲು.. ಕಣ್ಣೀರ ಕಡಲು...

Thursday, 7 April 2011

ಇದು ಕನ್ನಡಿಗರ ಹಾಡು..!!

ಹೆಚ್. ಎಸ್. ವೆಂಕಟೇಶಮೂರ್ತಿ ವಿರಚಿತ, ಪ್ರವೀಣ್ ಕುಮಾರ್ ಸಂಗೀತ ನಿರ್ದೇಶನದ, ಕನ್ನಡದ ಹೆಸರಾಂತ ಹಲವು ದಿಗ್ಗಜರು ಹಾಡಿದ ಹಾಡಿಗೆ ನನ್ನ ಪ್ರಿಯ ಮಿತ್ರ ವಿನಯ್ ಭಟ್ ಅತ್ಯಂತ ಸುಂದರವಾದ ವೀಡಿಯೊ ಮಾಡಿದ್ದಾರೆ.. ಕೇಳಿ.. ನೋಡಿ.. ಆನಂದಿಸಿ... ಹೇಗಿದೆ ಅಂತ ಹೇಳಿ..