Wednesday 9 October 2013

ದಾರಿಗಳು ಮಾತನಾಡುವುದಿಲ್ಲ...!!


ಏರು ತಗ್ಗು, ತಿರುವು ಮುರುವು
ನಿಲ್ಲಲೊಲ್ಲದ ನಿರಂತರ ಹರಿವು... 
ಊರಿಂದೂರಿಗೆ ನಂಟು 
ಬೆಸೆಯುವ ದಾರಿಗಳು 
ಬದಲಿಗೆ ಗಂಟು ಕೇಳುವುದಿಲ್ಲ... 

ಮಂದಿರಕೊ.. ಮಸಣಕೋ..
ನಾಡಿಗೊ... ಕಾಡಿಗೊ..
ಕರೆದೊಯ್ವ ದಾರಿಗಳು.. 
ಬಿದ್ದಲ್ಲೇ ಬಿದ್ದಿರುತ್ತವೆ ಹೊರತೂ... 
ಖುದ್ದು ನಡೆಯುವುದಿಲ್ಲ ...

ಹೀಗೆ ನಡೆದರೆ ಸ್ವರ್ಗ 
ಹಾಗೆ ಹಾದರೆ ನರಕ 
ಆಯ್ಕೆ ಮಾತ್ರ ಹೋಕರದೆ... 
ಅಪ್ಪಿತಪ್ಪಿಯೂ ದಾರಿಗಳು 
ಆಜ್ಞೆಗಳ ಉಸಿರುವುದಿಲ್ಲ... 

ಊರ ಎದೆಯನು ಸಿಗಿದು 
ಬಿಡದೆ ಬೆಟ್ಟವನೂ ಬಗೆದು 
ಅಭಿವೃದ್ದಿಯ ಅಂಧ ಓಟಕ್ಕೆ 
ಮೂಖ ಸಾಕ್ಷಿ ದಾರಿಗಳು
ಮರೆತೂ ಮಾತನಾಡುವುದಿಲ್ಲ... 


Tuesday 1 October 2013

ಕಾಲ ಇಲ್ಲಿ ಮಲಗಿದೆ


ನಾಡಿನ ಘಮಲಿನ ಅಮಲಿನ ಕರೆಗೆ
ಘಮ ಘಮಿಸುವುದ ಮರೆತು...
ಮೆರವಣಿಗೆ ಹೊರಟಿದೆ..
ಕರುಳ ಬಳ್ಳಿಗಳ ಕಡಿದ
ಕಾಡಿನ ಕುಸುಮಗಳ ದಂಡು..
ಶಹರವೋ.. 
ಪರಾತಗಟ್ಟಲೆ ಕನಸುಗಳನ್ನು
ಭಕಾಸುರನಂತೆ ನುಂಗಿ 
ನಾಚಿಕೆಯಿಲ್ಲದೆ ಹೊಸ ಹಾದರಗಳಿಗೆ
ಸಜ್ಜಾಗಿ ನಿಂತಿದೆ...


ನಮ್ಮದೋ.. ಅವರದೋ..
ಗೊತ್ತೇ ಆಗದ ಭಾಷೆ..
ಮಾಲು, ಮಲ್ಟಿಪ್ಲೆಕ್ಸುಗಳ
ತಳುಕು ಬಳುಕಿನ ತೃಷೆ..
ಬಾರು, ಪಬ್ಬುಗಳ ಮಬ್ಬು ಬೆಳಕಿನ ನಶೆ..
"ವಿಲಾಯತಿಯ ಖಯಾಲಿಯಲ್ಲಿ
ದೇಸಿ ಪರಂಪರೆಯ ಸಾವು"
ಬುದ್ದಿ ಜೀವಿಯೊಬ್ಬ ಆಮದಿನ ಅತ್ತರು ಪೂಸಿ
ಅಬ್ಬರಿಸಿದ ಮಾತು ಅಚ್ಚಾಗಿ ನಿಂತಿದೆ..

ಮುಂದಕೋ.. ಹಿಂದಕೋ..
ಅರ್ಥವಾಗದ ಅಭಿವೃದ್ದಿಯ ಓಟ..
ಮಾನ ಕಾಪಿಡದ ಬಟ್ಟೆ.. 
ಕಾಲಿ ದುಡಿವವರ ಹೊಟ್ಟೆ..
ಭಲದ ಅಮಲಲಿ ಮಿಂದು..
ಉಳ್ಳವರು ಉನ್ಮತ್ತ ಕುಣಿಯೆ
ಚಲನೆಯ ಮರೆತಂತೆ ಕಾಲ...
ಅರಿವಳಿಕೆ ಹೀರಿ ಮಲಗಿದೆ...