Thursday, 7 April 2011
ಇದು ಕನ್ನಡಿಗರ ಹಾಡು..!!
Friday, 16 July 2010
ದಿಲ್ ತೋ ಬಚ್ಚಾ ಹೈ ಜಿ..!!
ಹಸಿರು.. ಕೆಂಪು.. ಹಳದಿ... ನೀಲಿ.. ಆಹಾ.. ಕಾಮನ ಬಿಲ್ಲಿನ ಎಲ್ಲ ಬಣ್ಣಗಳೂ ಅದರಲ್ಲಿ ಸೇರಿಕೊಂಡಿತ್ತೋ ಏನೋ...! ನೋಡಿದ ತಕ್ಷಣ ಮನ ಸೂರೆಗೊಂಡುಬಿಟ್ಟಿತ್ತು.. ಹಠ ಮಾಡಿ, ಉಪವಾಸ ಸತ್ಯಾಗೃಹ ಮಾಡಿ, ಕಾಡಿ ಬೇಡಿ, ಏನೇನು ಸಾಧ್ಯವೋ ಎಲ್ಲವನ್ನೂ ಮಾಡಿದ ಮೇಲೆಯೇ ಅಪ್ಪ ಅದನ್ನು ನನಗೆ ಕೊಡಿಸಿದ್ದು... ಅದು ಕೈಗೆ ಸಿಕ್ಕಾಗ ನನಗಾದ ಸಂತಸ ಅಪರಿಮಿತ.. ಅಗಣಿತ.. ಸ್ವರ್ಗವೇ ನನ್ನ ಕೈನಲ್ಲಿ ಎಂಬ ಭ್ರಮೆ ಯಲ್ಲಿ ತೇಲತೊಡಗಿದ್ದೆ..
ಎದೆಗೊತ್ತಿ ಮುದ್ದು ಮಾಡಲು... ಅಮ್ಮ ಬೈದರೆ ದುಃಖ ಹೇಳಿಕೊಳ್ಳಲು... ಖುಷಿಯ ಖಬರ್ ಏನಾದರೂ ಇದ್ರೆ ಹಂಚಿಕೊಳ್ಳಲು.. ಮತ್ತೆ ಕೋಪ ಬಂದ್ರೆ ಎತ್ತಿ ಎಸೆಯಲು ಅದೇ ಬೇಕಿತ್ತು.. ಅದನ್ನ ಎದೆಗಪ್ಪಿ ಮಲಗಿ ಕಂಡ ಕನಸುಗಳಿಗೆ ಲೆಕ್ಕವೇ ಇಲ್ಲ... ಕೀಲಿ ಕೊಟ್ರೆ ಕುಣಿಯುತ್ತಿತ್ತು.. ಅದುಮಿದರೆ ಉಲಿಯುತಿತ್ತು... ನಡೆಯುತ್ತಿತ್ತು.. ಉರುಳುತಿತ್ತು.. ಒಟ್ಟಿನಲ್ಲಿ ಟೋಟಲ್ ಟೈಮ್ ಪಾಸ್..ನನ್ನ ಬಳಿ ಮಾತ್ರ ಇದ್ದಿದ್ರಿಂದ ಗೆಳೆಯರೆದುರು ಗರ್ವ ಪಡ್ತಾ ಇದ್ದೆ.. ಕೊಡೋದಿಲ್ಲ ಅಂತ ಆಟ ಆಡಿಸ್ತಿದ್ದೆ.. ಕೊಟ್ಟು ಹಾಗೇ ಕಸಿದು ಕೊಳ್ತಿದ್ದೆ.. ಅದಕ್ಕಾಗಿ ಗೆಳೆಯರ ಜೊತೆ ಬೇಜಾನ್ ಜಗಳ ಕೂಡ ಆಗಿ ಹೋಗಿತ್ತು ಅನ್ನಿ.. ಆದ್ರೆ ಒಂದಿನ ಆ ಆಟಿಕೆ ಮುರಿದು ಹೋಯ್ತು... ಅತ್ತೆ.. ಕಣ್ಣೀರು ಕಾಲಿಯಾದರೂ ಅತ್ತೆ.. ಅಪ್ಪ ಅಮ್ಮ ಎಷ್ಟು ಹೇಳಿದರೂ, ರಮಿಸಿದರೂ, ಬೈದರೂ ಕೇಳದೇ ಅತ್ತೆ.. ಊಟ ನಿದ್ರೆ ಆಟ ಪಾಠ ಎಲ್ಲ ಮರೆತು ಅತ್ತೆ...
ಸ್ವಲ್ಪ ದಿನದ ನಂತರ ಮನೆಗೆ ಮತ್ತೊಂದು ಹೊಸ ಆಟಿಕೆ ಬಂತು... ಆಹಾ..!! ಕಾಮನ ಬಿಲ್ಲಿನ ಎಲ್ಲ ಬಣ್ಣಗಳೂ ಅದರಲ್ಲಿ ಸೇರಿಕೊಂಡಿತ್ತೋ ಏನೋ...!! ಆಕರ್ಷಕ.. ಮನ ಮೋಹಕ..!!
ಕಾಲ ಯಾರಿಗೂ ನಿಲ್ಲೋದಿಲ್ಲ.. ನಮಗೀಗ "ದೊಡ್ಡವರು" ಅನ್ನೋ ಬೇಡದ, ಬಯಸದ ಪದವಿ ತಾನಾಗೆ ಅಂಟಿಕೊಂಡಿದೆ... ಆದ್ರೇನು ಮಾಡ್ತೀರಿ..?? ದಿಲ್ ತೋ ಅಭೀ ಬಚ್ಚಾ ಹೈ..!! ಕೈನಲ್ಲಿನ ಆಟಿಕೆಗಳು ಮಾತ್ರ ಬದಲಾಗಿವೆ...!!
.
.
Wednesday, 11 November 2009
ಮಹಾಪ್ರಳಯ...!!! (ಪೋಲಿಸ್ ನ್ಯೂಸ್ ನಲ್ಲಿ ಪ್ರಕಟಿತ)
ಜಗತ್ತಿನೆಲ್ಲೆಡೆ ಈಗ 2012 ರಲ್ಲಿ ಪ್ರಳಯವಾಗಿ ಭೂಮಿ ಸರ್ವನಾಶವಾಗುತ್ತದೆ ಎನ್ನುವ ಬಗ್ಗೆ ಗುಲ್ಲೆದ್ದಿದೆ... ಈ ಬಗ್ಗೆ ವಿಶೇಷ ವರದಿಗಳು ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ , ದೂರದರ್ಶನ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿವೆ.. ಹಾಗೆಯೇ ಈ ಕುರಿತು ಭಾರಿ ಬಜೆಟ್ ನ ಹಾಲಿವುಡ್ ಚಲನಚಿತ್ರವೊಂದು ಕೂಡಾ ಬಿಡುಗಡೆಯಾಗಿದೆ.. ಇದೇ ವಿಷಯದ ಬಗ್ಗೆ ಪೋಲಿಸ್ ನ್ಯೂಸ್ ಪತ್ರಿಕೆಗಾಗಿ ಮಿತ್ರ ವಿನಯ್ ಭಟ್ ರವರ ಜೊತೆಗೂಡಿ ಬರೆದ ಚಿಕ್ಕ ಪುಸ್ತಕವೊಂದರ ಪ್ರತಿಯನ್ನು ಇಲ್ಲಿ ಪೋಸ್ಟ್ ಮಾಡುತ್ತಿದ್ದೇನೆ... ಓದಿ... ಪ್ರತಿಕ್ರಿಯಿಸಿ... :)
















(ಕೃಪೆ: ಪೋಲಿಸ್ ನ್ಯೂಸ್ )
Wednesday, 23 September 2009
ಎಲ್ಲ ಕಡೆಯೂ ಇಂತವರು ಇರಬೇಕಿತ್ತು...!! ಭಾಗ ೨
ಸುತ್ತಲಿನ ಜನರ ನೋಟವೆಲ್ಲ ನಮ್ಮ ಮೇಲೇ ನೆಟ್ಟಿತ್ತು... ಪುಕ್ಕಟೆ ಮನೋರಂಜನೆ ಸಿಗ್ತಿದ್ರೆ ಯಾವೊನ್ ಬಿಡ್ತಾನೆ ಹೇಳಿ..? ನನಗೆ ಏನು ಮಾಡುವದು, TC ಜೊತೆ ಹೇಗೆ ಮಾತಾಡುವದು ಒಂದೂ ಗೊತ್ತಾಗ್ತಿಲ್ಲ... ನನ್ನ ಕೊಲೀಗ್ ಇಬ್ಬರಿಗೂ ಒಂದೇ ಟಿಕೆಟ್ ಮಾಡಿಸಿದ್ದರೆ ಹೀಗಾಗುತ್ತಿರಲಿಲ್ಲ...
" ಚಿಲ್ಲರೆ ಏಕೆ ವಾಪಸ್ ಕೊಡ್ತೀರಾ..?? ನೀವೇ ಇಟ್ಟುಕೊಳ್ಳಿ...!" ನನ್ನಲ್ಲಿನ ಅಹಂ ಮಾತನಾಡಿತ್ತು..
ಎಲ್ಲರ ಮುಂದೆ ಉಗಿಸಿಕೊಂಡ ನನ್ನ ಗತಿ ದೇವರಿಗೆ ಪ್ರೀತಿ ಅನ್ನುವಂತಿತ್ತು... ಹೌದು.. ತಪ್ಪೆಲ್ಲ ನಮ್ಮದೇ ಇತ್ತು.. ಟಿಕೆಟ್ ಮೇಲಿನ ನಿಯಮಗಳನ್ನ ಸರಿಯಾಗಿ ಓದದೇ ಇದ್ದದ್ದು, ಜೊತೆಗೆ ID Card ತಗೊಂಡು ಹೋಗದೇ ಇದ್ದದ್ದು, ಮೊದಲ TC verification ಮುಗಿಸಿದಾಗ ಸಹಿ ಮಾಡಿದ್ದಾನಾ ಇಲ್ವಾ ಅಂತ ನೋಡದೇ ಇದ್ದದ್ದು, ಅನಾವಶ್ಯಕವಾಗಿ ಜಗಳಕ್ಕೆ ನಿಂತು ನಗೆಪಾಟಲಿಗೆ ಗುರಿಯಾಗಿದ್ದು.. ಒಂದೇ ಎರಡೇ..!!? ಒಂದರ ನಂತರ ಒಂದರಂತೆ ತಪ್ಪುಗಳ ಸರಮಾಲೆ...
TC ತನ್ನ ಕೆಲಸ ಸರಿಯಾಗೇ ಮಾಡಿದ್ದ.. ಆಮೇಲೆ ನನಗೆ ಅನಿಸಿದ್ದಿಷ್ಟು.. ಸರ್ಕಾರದ ಎಲ್ಲ ಆಯಕಟ್ಟಿನ ಹುದ್ದೆಗಳಲ್ಲೂ ಇಂತಹ ನಿಷ್ಠಾವಂತ ಅಧಿಕಾರಿಗಳಿದ್ದರೆ ನಮ್ಮ ದೇಶದಲ್ಲಿ ಆಗ್ತಿರೋ ಎಷ್ಟೋ ಅವಗಡಗಳನ್ನ ತಪ್ಪಿಸಬಹುದಿತ್ತು.. ಅದೆಷ್ಟೋ ಪಾತಕಿಗಳನ್ನ, ದೇಶದ್ರೋಹಿಗಳನ್ನ ಸದೆಬಡಿಯಬಹುದಿತ್ತು..
ನಾನು ಮತ್ತದೇ ಟ್ರೈನ್ ನಲ್ಲಿ ಊರಿಗೆ ಹೋಗಲು ಎದುರು ನೋಡುತ್ತಿದ್ದೇನೆ.. ಈ ಬಾರಿ ID Card ಇಟ್ಟುಕೊಂಡೇ ಹೋಗ್ತೇನೆ... ಅದೇ TC ಮತ್ತೆ ಸಿಕ್ಕರೆ ಹಿಂದೆ ಮಾಡಿದ ತಪ್ಪಿಗೆ ಕ್ಷಮೆ ಕೇಳಿ ಅವನ ಪ್ರಾಮಾಣಿಕತೆಗೊಂದು ಸಲ್ಯೂಟ್ ಹೊಡೆಯುತ್ತೇನೆ...!!
Monday, 21 September 2009
ಎಲ್ಲ ಕಡೆಯೂ ಇಂತವರು ಇರಬೇಕಿತ್ತು...!! ಭಾಗ ೧
ಊರಿಗೆ ಹೋಗಲೇ ಬೇಕಿತ್ತು... ಕಳೆದ ಮೂರು ನಾಲ್ಕು ವರ್ಷಗಳಿಂದ ಗಣೇಶ ಚತುರ್ಥಿ ಗೆ ಊರಿಗೆ ಹೋಗಿರಲಿಲ್ಲ... ನಮ್ಮ ಉತ್ತರ ಕನ್ನಡದ ಮಂದಿಗೆ ಗಣೇಶ ಚತುರ್ಥಿಯೆಂದರೆ ಅದೇನೋ ಸಡಗರ, ಸಂಭ್ರಮ... ದೀಪಾವಳಿ, ನವರಾತ್ರಿ ಹಬ್ಬಗಳಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ಪ್ರಥಮ ಪೂಜಿತ ಗಣೇಶನ ಹಬ್ಬಕ್ಕೆ... ಆದರೆ ಕಳೆದ ಕೆಲವು ವರ್ಷಗಳಿಂದ ನನ್ನ ಉದ್ಯೋಗ ಈ ಸಡಗರ ಸಂಭ್ರಮ ಗಳಿಂದ ನನ್ನನ್ನು ದೂರ ಮಾಡಿತ್ತು..
ಆದರೆ ಈ ಬಾರಿ ತಪ್ಪದೇ ಹಬ್ಬಕ್ಕೆ ಊರಿಗೆ ಹೋಗಲೇ ಬೇಕೆಂದು ಗಟ್ಟಿ ಮನಸ್ಸು ಮಾಡಿದ್ದೆ... ನನ್ನ ಬಾಸ್ ಗೆ ರಜೆಯ ಮನವಿಯನ್ನೂ ಸಲ್ಲಿಸಿದ್ದಾಯ್ತು.. ಮಹಾಶಯ ಕೇಳಬೇಕಲ್ಲ.. ಸತಾಯಿಸಿ ಸತಾಯಿಸಿ ಕೊನೇ ಕ್ಷಣದಲ್ಲಿ ರಜೆ sanction ಆಯ್ತು... ಆದರೆ ಟಿಕೆಟ್..? ಸುಗಮ, VRL, KSRTC ಸೇರಿದಂತೆ ಎಲ್ಲ ಬಸ್ಸುಗಳೂ ೧೫ ದಿನಗಳ ಮುಂಚೆಯೇ ಭರ್ತಿಯಾಗಿದ್ದವಂತೆ...
ಇನ್ನೇನು ಮಾಡುವದು ಎನ್ನುವ ಯೋಚನೆಯಲ್ಲಿರುವಾಗಲೇ ನನ್ನ ಕೊಲೀಗ್ ಒಬ್ಬ ಸಹಾಯಕ್ಕೆ ಬಂದ.. ಅವನ ಊರು ಧಾರವಾಡ... ಶತಾಬ್ದಿ ಟ್ರೈನ್ ನಲ್ಲಿ ಹೋಗೋಣ.. ಟಿಕೆಟ್ ನ ಜವಾಬ್ದಾರಿ ನನಗೆ ಬಿಡಿ.. ಹಾವೇರಿಯಲ್ಲಿ ಇಳಿದುಕೊಂಡ್ರೆ ನಿಮ್ಮ ಊರಿಗೆ ಬೇಕಾದಷ್ಟು ಬಸ್ ಸಿಗುತ್ತವೆ.. ಮಧ್ಯಾಹ್ನ ೧.೩೦ - ೨ ಗಂಟೆಯೊಳಗೆ ನೀವು ಮನೆ ತಲುಪಬಹುದು ಅಂತ ಹೆಳಿದ... ಅವನ ಸಲಹೆ ನನಗೂ ಇಷ್ಟವಾಯ್ತು... ಆಯ್ತು ಮಾರಾಯ.. ನನಗೂ ಒಂದು ಟಿಕೆಟ್ ಮಾಡಿಸು ಅಂತ ಹೇಳಿದ್ದಾಯ್ತು..
ಕೊನೇ ಕ್ಷಣದಲ್ಲಿ ಟಿಕೆಟ್ ಮಾಡಿಸಿದ್ದರಿಂದ ಇಬ್ಬರಿಗೂ ಬೇರೆ ಬೇರೆ ಕಡೆ ಸೀಟ್ ಸಿಕ್ಕಿತ್ತು... ಒಂದೇ ಬೋಗಿಯಲ್ಲಿ ಸಿಕ್ಕಿದ್ದು ನಮ್ಮ ಅದೃಷ್ಟ..! ಕೊನೆಗೂ ಅಕ್ಕ ಪಕ್ಕ ಕುಳಿತವರೊಡನೆ ಹೊಂದಾಣಿಕೆ ಮಾಡಿಕೊಂಡು ಒಂದೇ ಕಡೆ ಕುಳಿತೆವು... ಬೆಳಿಗ್ಗೆ ಆಫೀಸ್ ನಿಂದ ಹಾಗೆ ಹೊರಟಿದ್ದರೂ ನಿದ್ದೆ ಬರುವ ಯಾವ ಲಕ್ಷಣವೂ ಕಾಣಿಸುತ್ತಿರಲಿಲ್ಲ... ಅದೂ ಇದು ಮಾತಾಡುತ್ತ, ಬೇಸರ ಬಂದರೆ ಟ್ರೈನ್ ನಲ್ಲಿ ಒಂದು ಬೋಗಿಯಿಂದ ಇನ್ನೊಂದು ಬೋಗಿಗೆ ತಿರುಗುತ್ತ ಸಮಯ ಹೋದದ್ದೇ ತಿಳಿಯಲಿಲ್ಲ...
ಇಡ್ಲಿ ವಡೆ ತಿಂದು ಹೊಟ್ಟೆಯನ್ನು ಸ್ವಲ್ಪ ತಣ್ಣಗಾಗಿಸಿ ಚಹಾ ಕುಡಿಯುತ್ತಾ ಕುಳಿತೆವು.. ಅಷ್ಟರಲ್ಲಿ ನಾವಿದ್ದ ಬೋಗಿಯಲ್ಲಿ TC ಯ ಪ್ರವೇಶವಾಯ್ತು... TC ಹತ್ತಿರ ಬರುತ್ತಲೇ ನನ್ನ ಕೊಲೀಗ್ ಬ್ಯಾಗ್ನಿಂದ ಟಿಕೆಟ್ ಹೊರ ತೆಗೆದ... ಆನ್ಲೈನ್ ಬುಕ್ ಮಾಡಿಸಿದ್ದ ಎರಡು ಪ್ರತ್ಯೇಕ ಟಿಕೆಟ್ಟುಗಳು... ಒಂದು ನನ್ನದು... ಹಾವೇರಿ ವರೆಗಿನದ್ದು... ಇನ್ನೊಂದು ಅವನದ್ದು.. ಧಾರವಾಡ ವರೆಗಿನದು...ಅಲ್ಲಿಯವರೆಗೂ ನಾನು ಟಿಕೆಟ್ ನೋಡಿರಲಿಲ್ಲ....
TC ಕೊಲೀಗ್ ಬಳಿ ಐಡೆಂಟಿಟೀ ಪ್ರೂಫ್ ಕೇಳಿದ... ಅವ ತನ್ನ ಬಳಿಯಿದ್ದ ಡ್ರೈವಿಂಗ್ ಲೈಸೆನ್ಸ್ ತೆಗೆದು ತೋರಿಸಿದ.. ಈಗ ನನ್ನ ಸರದಿ.. TC ನನ್ನ ಬಳಿಯೂ ಐಡೆಂಟಿಟೀ ಪ್ರೂಫ್ ಕೇಳಿದ.. ನನ್ನ ಬಳಿ ನನ್ನ ಆಫೀಸ್ ಐಡೆಂಟಿಟೀ ಕಾರ್ಡ್ ಬಿಟ್ಟರೆ ಮತ್ತೇನು ಇರಲಿಲ್ಲ... ಟಿಕೆಟ್ ಮೇಲಿನ ಸೂಚನೆಗಳ ಪ್ರಕಾರ ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್, ಎಲೆಕ್ಶನ್ ವೋಟರ್ ಐಡೆಂಟಿಟೀ ಕಾರ್ಡ್ ಅಥವಾ ಸರ್ಕಾರ ಅನುಮೋದಿಸಿರುವ ಇತರ ಯಾವುದೇ ಐಡೆಂಟಿಟೀ ಕಾರ್ಡ್ ಗಳಲ್ಲಿ ಯಾವುದಾದರೂ ಒಂದನ್ನು TC ಕೇಳಿದಾಗ ತೋರಿಸಲೇ ಬೇಕಿತ್ತು.. ಇಂಟರ್ನೆಟ್ ಮೂಲಕ ಟಿಕೆಟ್ ಬುಕ್ ಮಾಡಿಸಿದವರಿಗೆ ಮಾತ್ರ ಈ ನಿಯಮ... ಪ್ರಯಾಣಿಕನ ಬಳಿ ಪ್ರಯಾಣದ ಸಮಯದಲ್ಲಿ ಯಾವುದೇ ಐಡೆಂಟಿಟೀ ಕಾರ್ಡ್ ಇಲ್ಲವೆಂದಾದರೆ ಅದು ಟಿಕೆಟ್ ರಹಿತ ಪ್ರಯಾಣಕ್ಕೆ ಸಮ.... ಟಿಕೆಟ್ ನ ಹಣ, ಜೊತೆಗೆ ಅದರ ಎರಡರಷ್ಟು ಫೈನ್ ಕಟ್ಟಬೇಕಿತ್ತು...!! ನಾನು ಪೇಚಿನಲ್ಲಿ ಸಿಲುಕಿದೆ... TC ಇನ್ನೊಮ್ಮೆ ಗಟ್ಟಿಯಾಗಿ ಕೇಳಿದ.. " Show me any one of the Identity cards listed on your ticket.... ಯಾವುದಾದ್ರೂ ಒಂದು ಗುರುತಿನ ಚೀಟಿ ನಿಮ್ಮ ಬಳಿ ಇದ್ರೆ ತೋರ್ಸಿ.." ಒಂದರೆ ಕ್ಷಣ ನಾನು ನನ್ನ ಕೊಲೀಗ್ ಮುಖವನ್ನ, ಮತ್ತೆ TC ಮುಖವನ್ನ ನೋಡುತ್ತ ನಿಂತುಬಿಟ್ಟೆ...
(ಮುಂದುವರೆಯುವದು......)
