ಬರದಿ ಬಿರಿದ ಬರಡು ಭೂಮಿ ಮೇಲಣ ಅಂಬರ
ಕನಿಕರದ ಕಂಬನಿ ಸುರಿಸುವದಿಲ್ಲ..
ಕನಿಕರದ ಕಂಬನಿ ಸುರಿಸುವದಿಲ್ಲ..
ಹಸಿರ ಹೆಸರು ಮರೆತ ಮರದ ರೆಂಬೆಗಳಲ್ಲಿ
ಹೊಸ ಚೈತ್ರದ ಚಿಗುರು ಕುಡಿಯೊಡೆಯುವದಿಲ್ಲ..
ಈ ಹಾಳು ಕವಿತೆಗಳಿಂದ ಏನೂ ಆಗುವದಿಲ್ಲ...
ಚೆಲ್ಲಿದರು ತರ್ಪಣಕೆ ಎದೆ ಬಗೆದು ನೆತ್ತರನು
ಕಲ್ಲು ದೇವರು ಕಣ್ಣ ತೆರೆಯುವದೆ ಇಲ್ಲ
ಕಣ್ಣುಗಳಲಿ ನೀರ್ಬತ್ತಿ ಹರಿದರೂ ಹನಿ ರಕ್ತವದು
ಮಣ್ಣು ಸೇರಿದ ಪ್ರೀತಿ ಮಾತನಾಡುವದೆ ಇಲ್ಲ...
ಈ ಹಾಳು ಕವಿತೆಗಳಿಂದ ಏನೂ ಆಗುವದಿಲ್ಲ...
ಉಸಿರು ನಿಲ್ಲುವವರೆಗೆ ಗೆಯ್ದರೂ ಕಾಯಕವ
ಹಸಿದ ಹೊಟ್ಟೆಗೆ ಹಿಟ್ಟು ಹುಟ್ಟುವದೆ ಇಲ್ಲ
ಎಡೆಬಿಡದೆ ಎಡೆಎಡೆಯಲಿ ಗುಗ್ಗಳವ ಸುರಿದರೂ
ಒಡೆದ ಕನ್ನಡಿ ಹರಳು ಕೂಡುವದೆ ಇಲ್ಲ
ಈ ಹಾಳು ಕವಿತೆಗಳಿಂದ ಏನೂ ಆಗುವದಿಲ್ಲ..