Wednesday 27 April 2011

ಕಣ್ಣೀರ ಕಡಲು...!!



ನಿಲ್ಲುವ ಮಾತೇ ಇಲ್ಲ...
ಒಂದೇ ಸಮನೆ
ಧೋ..ಎಂದು ಸುರಿಯುತ್ತಿದೆ.. ಮಳೆ...
ಸುತ್ತಲೂ ಕತ್ತಲು... ಕಣ್ಣೀರ ಕಡಲು...

ಎಲ್ಲದಕ್ಕು ಕಾರಣ ಆ ಚಂದ್ರಮ...
ಪ್ರತಿ ಸಾರಿಯಂತೆ ನಿನ್ನೆ ಮತ್ತೆ...
ಪೌರ್ಣಮಿಯ ನೆವವೊಡ್ಡಿ..
ಲಲನೆಯರ ಸೆಳೆವ ತೆವಲು ಹೆಚ್ಚಿ
ಸೂರ್ಯನಿಂದ ಒಂದಿಷ್ಟು ಬೆಳಕು
ಕಡ ತಂದು ಮಿರ್ರನೆ ಮಿಂಚುತ್ತಿದ್ದ..

ಏನನಿಸಿತೋ ನನ್ನ ನೋಡಿ...
 ಒಮ್ಮೆ ತನ್ನತ್ತ ಸೆಳೆದ...
ಗೆಳೆಯಾ.. ಎನ್ನುತ್ತಾ ಮಾತಿಗೆಳೆದ...

ವಿರಹ.. ದುಃಖ.. ಏಕಾಂತ.. ಬೇಸರ...
ಎಲ್ಲ ತೋಡಿಕೊಂಡೆ.. 
ಪರಿಹರಿಸು ಗೆಳೆಯಾ..
ಪರಿ ಪರಿಯಾಗಿ ಬೇಡಿಕೊಂಡೆ..

ಪಾಪಿ.. ನನ್ನ ಕಥೆಯ 
ಹೋಗಿ ಹೋಗಿ ಮೋಡಗಳಿಗೆ ಹೇಳುವದೆ...??

ನಿಲ್ಲುವ ಮಾತೇ ಇಲ್ಲ...
ಒಂದೇ ಸಮನೆ ಸುರಿಸುತಿವೆ....
ಸುತ್ತೆಲ್ಲ ಕತ್ತಲು.. ಕಣ್ಣೀರ ಕಡಲು...

Saturday 23 April 2011

ಮೂರು ಹನಿ...!!

~ ೧ ~ 


ಸ್ವಾರ್ಥಿಗಳ ಲೋಕವಿದು
ಗೆಳೆಯಾ..ಜನರೆದುರು 
ಕಣ್ಣೀರ ಸುರಿಸದಿರು.. ಅದು ತಪ್ಪು...

ಮನದ ಗಾಯಗಳ
ತಪ್ಪಿಯೂ ತೋರದಿರು..
ಎಲ್ಲ ಕೈಯ್ಯಲ್ಲಿ ಹಿಡಿದಿಹರು ಉಪ್ಪು...!!


~ ೨ ~


ಕಾಡದಿರಿ ನೆನಪುಗಳೇ ಇಂದು..
ಜಗದ ಮೆರವಣಿಗೆಯಲಿ
ನಾನು ಸಹ ಒಂದಾಗಿ ಸಾಗ ಬೇಕು

ಜಿನುಗುವಾ ಕಣ್ಣೀರ
ಮರೆಸಿ ನಾ ಮರೆಯಲ್ಲಿ
ಸುಮ್ಮನೆ ಸುಳ್ಳು ನಗೆ ನಗ ಬೇಕು..!



~ ೩ ~


ಬಂಧನದ ಭಯವಿರದೆ
ದಣಿಯದೇ ಕುಣಿಯುತಿಹೆ
ನೋಡಿ ನರ್ತನದಾ ಹೆಜ್ಜೆ..

ಬೆಸೆದು ಬೀಗಿಹನು ಕಾಲ
ಕಾಲ್ಗಳಲಿ ಸರಪಳಿಯ..
ನನಗದುವೆ ಬಣ್ಣದಾ ಗೆಜ್ಜೆ..!!

Thursday 7 April 2011

ಇದು ಕನ್ನಡಿಗರ ಹಾಡು..!!

ಹೆಚ್. ಎಸ್. ವೆಂಕಟೇಶಮೂರ್ತಿ ವಿರಚಿತ, ಪ್ರವೀಣ್ ಕುಮಾರ್ ಸಂಗೀತ ನಿರ್ದೇಶನದ, ಕನ್ನಡದ ಹೆಸರಾಂತ ಹಲವು ದಿಗ್ಗಜರು ಹಾಡಿದ ಹಾಡಿಗೆ ನನ್ನ ಪ್ರಿಯ ಮಿತ್ರ ವಿನಯ್ ಭಟ್ ಅತ್ಯಂತ ಸುಂದರವಾದ ವೀಡಿಯೊ ಮಾಡಿದ್ದಾರೆ.. ಕೇಳಿ.. ನೋಡಿ.. ಆನಂದಿಸಿ... ಹೇಗಿದೆ ಅಂತ ಹೇಳಿ..