Saturday, 23 April 2011

ಮೂರು ಹನಿ...!!

~ ೧ ~ 


ಸ್ವಾರ್ಥಿಗಳ ಲೋಕವಿದು
ಗೆಳೆಯಾ..ಜನರೆದುರು 
ಕಣ್ಣೀರ ಸುರಿಸದಿರು.. ಅದು ತಪ್ಪು...

ಮನದ ಗಾಯಗಳ
ತಪ್ಪಿಯೂ ತೋರದಿರು..
ಎಲ್ಲ ಕೈಯ್ಯಲ್ಲಿ ಹಿಡಿದಿಹರು ಉಪ್ಪು...!!


~ ೨ ~


ಕಾಡದಿರಿ ನೆನಪುಗಳೇ ಇಂದು..
ಜಗದ ಮೆರವಣಿಗೆಯಲಿ
ನಾನು ಸಹ ಒಂದಾಗಿ ಸಾಗ ಬೇಕು

ಜಿನುಗುವಾ ಕಣ್ಣೀರ
ಮರೆಸಿ ನಾ ಮರೆಯಲ್ಲಿ
ಸುಮ್ಮನೆ ಸುಳ್ಳು ನಗೆ ನಗ ಬೇಕು..!



~ ೩ ~


ಬಂಧನದ ಭಯವಿರದೆ
ದಣಿಯದೇ ಕುಣಿಯುತಿಹೆ
ನೋಡಿ ನರ್ತನದಾ ಹೆಜ್ಜೆ..

ಬೆಸೆದು ಬೀಗಿಹನು ಕಾಲ
ಕಾಲ್ಗಳಲಿ ಸರಪಳಿಯ..
ನನಗದುವೆ ಬಣ್ಣದಾ ಗೆಜ್ಜೆ..!!

Thursday, 7 April 2011

ಇದು ಕನ್ನಡಿಗರ ಹಾಡು..!!

ಹೆಚ್. ಎಸ್. ವೆಂಕಟೇಶಮೂರ್ತಿ ವಿರಚಿತ, ಪ್ರವೀಣ್ ಕುಮಾರ್ ಸಂಗೀತ ನಿರ್ದೇಶನದ, ಕನ್ನಡದ ಹೆಸರಾಂತ ಹಲವು ದಿಗ್ಗಜರು ಹಾಡಿದ ಹಾಡಿಗೆ ನನ್ನ ಪ್ರಿಯ ಮಿತ್ರ ವಿನಯ್ ಭಟ್ ಅತ್ಯಂತ ಸುಂದರವಾದ ವೀಡಿಯೊ ಮಾಡಿದ್ದಾರೆ.. ಕೇಳಿ.. ನೋಡಿ.. ಆನಂದಿಸಿ... ಹೇಗಿದೆ ಅಂತ ಹೇಳಿ.. 


Saturday, 26 February 2011

ಎರಡು ಹನಿ..!

ವಜ್ರ (ಮುನಿ) Money

ಮಡದಿಗೆ ಕೊಟ್ಟಷ್ಟೂ
ಸಾಲದಂತೆ
ವಜ್ರ ಮತ್ತು Money..
ಪಾಪ..
ಅದಕ್ಕೇ ನಮ್ಮ ರಾಯರು
ಕಚೇರಿಯ ಸಿಬ್ಬಂದಿಗಳ
ಪಾಲಿಗೆ "ವಜ್ರಮುನಿ"..!!


ಮುಟ್ಟಿದರೆ Money

ಮದುವೆಗೆ ಮೊದಲು
ಪ್ರತಿ ಸ್ಪರ್ಶಕೂ ನುಲಿದು ನಲಿದು
ನಾಚಿ ನೀರಾಗುತಿದ್ಲು ಚೆಲುವೆ
ಸಾಕ್ಷಾತ್ ಮುಟ್ಟಿದರೆ ಮುನಿ....!
ಈಗ ಮುಟ್ಟುವದಾದರೆ
ಕೊಡಲೇ ಬೇಕಂತೆ
ಒಂದು ಮೂಟೆ Money..!

Saturday, 12 February 2011

ದೊಡ್ಡ ಕನಸುಗಳಿಗೆ ಚಿಲ್ಲರೆ ಬೇಕಿದೆ..!!

ಅದೋ ಅಲ್ಲಿ ಮೂಲೆಯಲ್ಲಿ
ಧೂಳು ಹತ್ತಿ ಬಿದ್ದಿದೆಯಲ್ಲ...
ನಾನು ಹುಟ್ಟಿದಾಗಿನಿಂದ
ಕಟ್ಟಿದ ದೊಡ್ಡ ದೊಡ್ಡ ಕನಸುಗಳ ಮೂಟೆ...

ಅಂದುಕೊಂಡಿದ್ದು ಇಷ್ಟೇ..
ಒಂದು ದಿನ ದೊಡ್ಡ ಖುಷಿಯ ಖರೀದಿಸಬೇಕು
ಈ ಕೂಡಿಟ್ಟ ಕನಸುಗಳ ಬಿಂದಾಸ್ ಉಡಾಯಿಸಬೇಕು..!

ಎಷ್ಟೋ ವರ್ಷಗಳಿಂದ ಕೂಡಿಟ್ಟ ಕನಸುಗಳವು
ಸಾವಿರ ಸಾವಿರ ರುಪಾಯಿಯ ನೋಟಿನಂತವು
ಚಿಲ್ಲರೆಯಾದರೆ ಚಿಕ್ಕ ಚಿಕ್ಕ ಖುಷಿಯ
ಖರೀದಿಗೇ ಖಾಲಿಯಾದೀತೆಂಬ ಭಯ...

ಅದೆಷ್ಟೋ ಮಂದಿ ನನ್ನವರು
ನನ್ನ ಆಪ್ತರು, ನನ್ನ ಪರಿಚಯದವರು
ಕನಸುಗಳ ಸಾಲ ಕೇಳಿದರು
ಪ್ರತಿ ಸಾರಿಯೂ ನನ್ನ ಉತ್ತರ ಒಂದೇ ..
"ಇಲ್ಲ.. ದೂರವಾಗಿ ನನ್ನಿಂದ..
ದೊಡ್ಡ ಖುಷಿಯ ಖರೀದಿ ಮಾಡ ಬೇಕಿದೆ ನಾನು..
ನಿಮಗಾಗಿ ಒಂದು ಕನಸೂ ಇಲ್ಲ.. "

ಅದೆಷ್ಟೋ ಬಾರಿ..
ದಾರಿ ಬದಲಿಸಿ ತಿರುಗಿಹೆನೋ ಗೊತ್ತಿಲ್ಲ..
ಅಲ್ಲೆಲ್ಲಾದರೂ ಸಾಲ ಕೇಳುವವರು ಇರಬಹುದೆಂಬ ಶಂಕೆ..
ಅನುಕ್ಷಣ ಮನದಲ್ಲಿ ದೊಡ್ಡ ಖುಷಿಯ ಮಾಯಾ ಜಿಂಕೆ..

ಈಗ... ಇಷ್ಟು ವರ್ಷದ ನಂತರ..
ಪರಿಸ್ಥಿತಿಯ ಕೈ ಗೊಂಬೆಯಾಗಿ
ಕುಣಿದು ದಣಿದ ನಂತರ ಅರಿವಾಗಿದೆ...
ಚಿಕ್ಕ ಚಿಕ್ಕ ಖುಷಿಯಿಂದಲೇ ದೊಡ್ಡ ಖುಷಿ ಸಿಗುವುದಂತೆ..!!

ಇಂದು ಆಸೆಯಾಗುತ್ತಿದೆ..
ನನ್ನೆಲ್ಲ ದೊಡ್ಡ ಕನಸುಗಳ ಮೂಟೆಯನ್ನು ಖಾಲಿ ಮಾಡಬೇಕು..
ಎಲ್ಲ ಚಿಕ್ಕ ಚಿಕ್ಕ ಖುಶಿಗಳನ್ನು ದೊಚಬೇಕು..
ಬಾಚಿ ಎದೆಗವಚಿಕೊಳ್ಳಬೇಕು...

ಆದರೆ ಯಾರ ಬಳಿಯೂ ನನ್ನ ಸಾವಿರ ಸಾವಿರ ರುಪಾಯಿಯ
ನೋಟಿನಂತಹ ದೊಡ್ಡ ಕನಸುಗಳಿಗೆ ಚಿಲ್ಲರೆ ಇಲ್ಲವಂತೆ...!!

(ಹಿಂದೆಲ್ಲೋ ಓದಿದ ಹಿಂದಿ ಕವಿತೆಯೊಂದರಿಂದ ಪ್ರಭಾವಿತ)

Wednesday, 13 October 2010

ಹಾರದೀಗ ನಿದಿರೆ..!!




ಹುಣ್ಣಿಮೆಯ ರಾತ್ರಿಯಲಿ
ಚೊಂಬುಗೆನ್ನೆಯ ತುಂಬು ಚಂದ್ರನ
ಒಲಿಸಲು ತಾರೆಗಳು ಜಮಾಯಿಸಿದರೆ
ನನ್ನ ನಿದಿರೆಗೆ ಗರಿ ಮೂಡುತ್ತದೆ...

ಕಣ್ಣ ಕೋಟೆಯ ದಾಟಿ
ಗುರಿಯ ಹಂಗನು ಮೀರಿ
ದಣಿಯದೆ ಮನ ತಣಿಯದೆ
ದೂರ ದೂರಕೆ ಹಾರುತ್ತದೆ

ಒಳ್ಳೆಯದೇ ಆಯ್ತು..
ನೀನು ತೆಕ್ಕೆಗೆಳೆದು ರೆಕ್ಕೆಗಳ ಕಡಿದೆ..

ನಿನ್ನ ಬಾಹು ಬಂಧನದಲ್ಲೀಗ
ನನ್ನ ಕಣ್ಣುಗಳಿಗೆ ಸುಖನಿದ್ರೆ..

Thursday, 23 September 2010

ತಾತ್ಕಾಲಿಕ ವಿರಾಮ...!

ಕೆಲವು ದಿನಗಳಿಂದ ಬ್ಲಾಗ್ ಕಡೆ ಬರೋದಕ್ಕೆ ಆಗ್ತಾ ಇಲ್ಲ.. ಪ್ರತಿಕ್ರಿಯೆ, ಪ್ರೀತಿ, ಪ್ರೋತ್ಸಾಹ ಸದಾ ಹೀಗೆಯೇ ಇರಲಿ.. ಶೀಘ್ರದಲ್ಲಿಯೇ ಹೊಸ ಲೇಖನ,ಕಾರ್ಟೂನ್, ಕವನಗಳನ್ನ ಪೋಸ್ಟ್ ಮಾಡುತ್ತೇನೆ..
ಪ್ರೀತಿಯಿಂದ ದಿಲೀಪ್... :)