Sunday, 15 September 2019

ಕೀಚಕ ಜೀವಂತ..!!

ಕೀಚಕ ಜೀವಂತ..!
**************

ಅವಳ್ಯಾರದೋ ಕಣ್ಣೋಟದ
ನಶೆಯ ಕವಿತೆಯಾಗಿಸುವ ಹೊತ್ತಿಗೆ
ಮೂರನೇ ಬಾಟಲಿಯ ಕೊನೆಯ
ಪೆಗ್ಗನ್ನು ನೀರಿಲ್ಲದೇ ಗುಟುಕರಿಸಿದ್ದಾನೆ...

ನಿನ್ನೆ ಪರಿಚಯವಾದವಳ ಮಂಚಕ್ಕೆ
ಸೆಳೆದು ಬಿಚ್ಚಮ್ಮಳಾಗಿಸುವ ಹೊತ್ತಿಗೆ
ಸುಖ ಸಂಸಾರಕ್ಕೆ ಸಾವಿರ ಸೂತ್ರಗಳೆಂಬ
ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾನೆ..

"ಯೂ ಆರ್ ಎ ಹೋರ್"
ಎಂದು ಅರಚುವ ಹೊತ್ತಿಗೆ
ತಾನೊಂದು "ಬೀಜದ ಹೋರಿ"
ಎನ್ನುವದ ಮರೆತಿದ್ದಾನೆ...

ಸುಂದರವಾದದ್ದೆಲ್ಲ ತನ್ನದಾಗಿಸುವ
ದುರಾಸೆಯ ದಾವಂತ..
ಬಿಳಿ ಕೂದಲಿಗೆ ಡಾಯ್ ಬಳಿದ
ಮುಖಗಳಲಿ ಕೀಚಕ ಜೀವಂತ...!

ನೆನಪುಗಳ ಮೂಟೆ






ಬಾರಾ ಪ್ರಿಯಸೋದರ ಜೊತೆ ನಾವು ಪೇರಿಸುವ
ಮನದ ಗೋದಾಮಿನಲಿ ನೆನಪುಗಳ ಮೂಟೆ
ಬಾನ ಎಲ್ಲೆಯ ಮೀರಿ ಜೊತೆ ಸೇರಿ ಏರಿಸುವ
ಒಲವ ಅಡಿಪಾಯದ ಮೇಲೆ ಕನಸುಗಳ ಕೋಟೆ

ಸವೆಸೋಣ ಬಾ ಜೊತೆಗೆ ಕೈಯಲ್ಲಿ ಕೈ ಹಿಡಿದು
ತೋಟದಾಚೆಯ ದಟ್ಟ ಕಾನನದ ಹಾದಿ
ಸವಿಯೋಣ ಬಾ ಜೊತೆಗೆ ಬೆಟ್ಟದಾ ಹಣ್ಣುಗಳ
ಕಾಡುಗಿಡ ಪೊದೆಗಳನು ನಾವು ಜಾಲಾಡಿ

ನೇರಳೆ ನುರುಕಲು ಪರ್ಗೆ ಹುಳಿ ಕೌಳಿಕಾಯಿ
ಪೇರಲೆ ಮುರುಗಲು ಜಂಬೆ ಆಹಾ ನೆಲ್ಲಿಕಾಯಿ
ಸಂಪಿಗೆ ಪನ್ನೇರಲು ಜೊತೆ ಹೊಳೆದಾಸವಾಳ
ಗೇರು ರಂಜಲು ಹುಲಿಗೆ ಮುಳ್ಳಣ್ಣಿನ ಮೇಳ

ಅಜ್ಜಿಯ ಕಥೆ ಕೇಳುತ ಸುಖನಿದಿರೆಗೆ ಜಾರೋಣ
ಅಮ್ಮನ ಮುದ್ದಿಗೆ ಸೋತು ಮಡಿಲನು ಏರೋಣ
ಕದ್ದೊಮ್ಮೆ ನೋಡುವ ಬಾ ಅಜ್ಜನ ಸಂದೂಕ
ಚೌತಿಗೆ ತರುವನು ಅಪ್ಪ ರೀಲಿನ ಬಂದೂಕ

ಹೊಳೆಯಾ ನೀರಲಿ ನಾವು ಈಜುವ ಮೀನಂತೆ
ತೊಳೆಯ ಹಲಸಿನ ಜೊತೆಗೆ ಸಿಹಿಯಾ ಜೇನಂತೆ
ಬರೆದಿಡುವ ಚಂದ್ರಮನಾ ಎಡೆಗೊಂದು ಏಣಿ
ಹರಿಬಿಡುವ ಮಳೆ ನೀರಿನಲಿ ಕಾಗದದ ದೋಣಿ

ಆಗಸದಿ ಹಾರಿಸುವ ಬಾರೋ ಬಣ್ಣದ ಗಾಳಿಪಟ
ಜೊತೆಜೊತೆಗೆ ಕಲಿಯೋಣ ಖುಷಿ ಜೀವನದ ಪಾಠ
ಎಂದೆಂದಿಗೂ ಚಿರವಾಗಲಿ ನಮ್ಮಯ ಈ ಪ್ರೀತಿ
ನಾ ನಿನಗೆ ನೀ ನನಗೆ ಇರೆ ಇನ್ಯಾರ ಭೀತಿ.?

ಬಾರಾ ಪ್ರಿಯಸೋದರ ಜೊತೆ ನಾವು ಪೇರಿಸುವ
ಮನದ ಗೋದಾಮಿನಲಿ ನೆನಪುಗಳ ಮೂಟೆ
ನಗುವ ತೋಟದ ಚೆಲುವ ಕುಡಿಗಳು ನಾವು
ಕಟ್ಟೋಣ ಜೊತೆ ಸೇರಿ ಕನಸುಗಳ ಕೋಟೆ

Thursday, 12 September 2019

ವಯೋಧರ್ಮ



ಬಾಗಿಬಳಲಿದ ದೇಹ 
ಸುರುಟಿದೊಣ ಚರ್ಮ...
ಮಸುಪು ಕಣ್ಣಿನ ನೋಟ
ತೊದಲು ವಯೋಧರ್ಮ!

ಮಂದ ಕಿವಿಯಾಲಿಕೆಯು
ಕಂಪಿಸುವ ಕೈಯಿ...
ಕೃತಕ‌ದಂತದ ಕವಚ
ಠಂಕಿಸಿದ ಬಾಯಿ!

ಮಾಗಿದೆನ್ನಯ ಬಾಳು
ಪರಿಪೂರ್ಣ ಗ್ರಂಥ
ಕನ್ನಡಿಯ ಹೊರಗಿನ್ನೂ
ನಾನು ಜೀವಂತ!

ಹಾಲುಬಿಳುಪಿನ ದೇಹ
ಹೊಳೆವ ಮೈಕಾಂತಿ..
ಮೊನಚುಗಣ್ಣಿನ ನೋಟ
ಮಾತಿನಲಿ ಛಾತಿ!

ಮಿನುಗುಮುತ್ತಿನ ದಂತ
ಅಪ್ಸರೆಯ ಉಡುಗೆ..
ನವಿಲನಾಟ್ಯಕು ಚಂದ
ಮೇನಕೆಯ ನಡುಗೆ!

ಬಾಳಪುಟಗಳ ಬರೆವ
ಆಸೆ ದಾವಂತ..
ಕನ್ನಡಿಯ ಒಳಗಿನ್ನೂ
ನಾನು ಶ್ರೀಮಂತ..!!

ಗೆಳೆತನ







ಬಯಸೆ ನಾನು ಎಂದಿಗು 
ದೊಡ್ಡ ಜನರ ಗೆಳೆತನ...
ಅಳತೆಗೋಲು ಆಗದು 
ಸ್ನೇಹಕ್ಕೆ ಪದವಿ ಸಿರಿತನ..
ಬೊಗಸೆಯೊಡ್ಡಿ ಬೇಡುವೆ 
ಹರಸು ದೇವ ಅನುದಿನ..
ಸ್ನೇಹಿತರ ಬಾಳು ಬೆಳಗಲಿ,
ಸಿಗಲಿ ಕೀರ್ತಿ ಹಿರಿತನ..

ನೋವ ಮರೆಸಿ ನಲಿವ ಬಲವ
ಸ್ನೇಹ ತುಂಬಿ ಕೊಡುವುದು...
ಸೋಲಿನಲ್ಲು ಗೆಲುವ ಛಲವ
ಸ್ನೇಹ ಹೊತ್ತು ತರುವುದು...
ಶುದ್ದ ಸ್ನೇಹವಿರುವ ಕಡೆಗೆ
ಸ್ವಾರ್ಥವೆಂದು ಸುಳಿಯದು...
ಉಸಿರು ಇರುವವರೆಗು ಜೊತೆಗೆ
ಸ್ನೇಹವೊಂದೆ ಉಳಿವುದು...

ಜಾತಿಮತ ಮೇಲುಕೀಳು
ಸ್ನೇಹವೆಂದೂ ಕೇಳದು..
ಊರುಕೇರಿ ವೇಷಭಾಷೆ
ಸ್ನೇಹಕೆಂದೂ ಕಾಣದು...
ಅಸೂಯೆಈರ್ಷ್ಯೆ ಭೇದಭಾವ
ಸ್ನೇಹವೆಂದೂ ತೋರದು..
ಹೊನ್ನುಮಣ್ಣು ಆಸ್ತಿಪಾಸ್ತಿ
ಸ್ನೇಹವೆಂದೂ ಬೇಡದು...

ನೂರು ಕಹಿಯ ಮರೆಸುವಂತ
ಸ್ನೇಹಶಕ್ತಿ ಅದ್ಬುತ..
ಸಾವಗೆಲುವ ಶಕ್ತಿಯೀವ
ಸ್ನೇಹವೊಂದು ಅಮೃತ..
ಭೂಮಿಬಾನ ನಡುವ ಬಂಧ
ಸ್ನೇಹದಿಂದ ಪ್ರೇರಿತ...
ನಾಲ್ಕು ದಿನದ ಬಾಳಿನಲ್ಲಿ
ಸ್ನೇಹವೊಂದೆ ಶಾಶ್ವತ..

ಕ್ಷಣದ ಕೋಪ


ಹರಿದ ಹಾಳೆ, ಒಡೆದ ಗಾಜು 
ಮರಳಿ ಒಂದುಗೂಡದು
ಕ್ಷಣದ ಕೋಪದಿಂದ ಮುರಿದ 
ಮನಸು ಮತ್ತೆ ಸೇರದು..!

ಹರಿವ ಹೊಳೆ ಪ್ರವಾಹವಾಗೆ 
ಬಾಳಿಗಿಹುದೆ ಆಸರೆ...?
ಸಿಟ್ಟ ನೆರೆಗೆ ಕೊಚ್ಚಿಹೋದ
ಪ್ರೀತಿ ತಿರುಗಿ ಬಾರದು..!

ಹರಿತ ಮಾತು, ಮುನಿಸ ಮೌನ 
ಈಟಿಯಂತೆ ಇರಿಯಲು
ಕೋಪ ಕೊರೆದ ಮನದಗಾಯ
ಸಹಜವಾಗಿ ಆರದು..!

ಪ್ರೀತಿ ಜನರ ನಡುವೆ ಕೆಸರ
ಎರಚೆ ಕ್ಷಣದ ಕೋಪವು
ಕೆಡುವ ನಂಟು ಕೊಚ್ಚೆಯಂತೆ 
ಅಪ್ಪಿಕೊಳಲು ಆಗದು..!

ಕೃತಜ್ಞತೆ!



ತೆರೆಯಮರೆಯಲಿ
ತರಳುತರುವಿನತೆರದಿ
ಪೊರೆವ ಜನನಿಯ ಋಣವ
ತೆರಲಿಹುದೆ ಎಣೆಯು

ಗುರಿಯನರುಹಿದ
ಗುರುಹಿರಿಯರನವರತ
ಗುರುತಿನಲಿ ನಮಿಸುವದು
ಗುರುತರದ ಹೊಣೆಯು

ಉಮೆಯ ಒಡೆಯನ
ರಮೆಯ ರಮಣನ ಹರಕೆ
ವಿಮೆಯಿರಲು ಇರುವಿನಲಿ
ರಮ ಮನದ ಮನೆಯು

ಅವನಿಯುಸಿರನು
ನೆವವಿರದೆ ನೆರವಿಗಿಡೆ
ನವಿರು ಬದುಕಿನ ಪಥವು
ಬವಣೆಗಳ ಕೊನೆಯು

ಅರಿಯದನುದಿನ
ಇರಿವ ನುಡಿಯನು ನುಡಿವ
ಅರಿಗಳಿಗೊಳಿತಿನೊಸಗೆ
ಹರಸುವದೆ ಕಣೆಯು



ತರಳುತರು = ತೆಂಗಿನಮರ, ಕಲ್ಪ ವೃಕ್ಷ
ಒಸಗೆ = ಉಡುಗೊರೆ
ರಮ = ಸಂತೋಷದಾಯಕವಾದುದು
ಕಣೆ = ಬಾಣ ( ಇಲ್ಲಿ ಪ್ರತೀಕಾರ ಎಂಬ ಅರ್ಥದಲ್ಲಿ ಬಳಸಿದ್ದೇನೆ)






ನಲಿವ ಹಿಂದಿನ ನೋವು



ಹೊಸ ಚಿಗುರುಗಳದೋ ಬೆಡಗು ಬಿನ್ನಾಣ ರಸಕೇಳಿ
ಚಿಗುರೊಡೆವ ನೋವ ಹಳೆಯ ಕೊಂಬೆಗಳಿಗೆ ಕೇಳಿ

ಪತಂಗಗಳದೋ ಬೆಳಕ ನೋಡುತ ಮೈಮರೆತ ಕುಣಿತ
ಉರಿದುರಿದು ಬೆಳಗುವ ಉರಿಯ ದೀಪಗಳಿಗೆ ಕೇಳಿ

ಮುಡಿಗೆ ಹೂ ಮುಡಿದು ಮುದದಿ ಮೆರೆವಳು ಲಲನೆ
ಬೆವರುಣಿಸಿ ಹೂ ಬೆಳೆವ ಗುಟ್ಟ ಮಾಲಿಯನು ಕೇಳಿ

ಕವಿಪುಂಗವರಿಗೆ ಸ್ಫೂರ್ತಿ ಸೆಲೆಯಂತೆ ಶಿಲಾಬಾಲಿಕೆ
ಉಳಿಯ ಪೆಟ್ಟಿನ ನೋವ ಕಡೆದ ಶಿಲೆಗಳಿಗೆ ಕೇಳಿ

ರೆಕ್ಕೆ ಬಲಿತು ಬಾನೆತ್ತರ ಜಿಗಿವ ಮರಿಗಳದದೇನು ಅಂದ
ಹೊಟ್ಟೆಕಟ್ಟಿ ಮೊಟ್ಟೆಕಾಯ್ವ ಬವಣೆ ಹಿರಿಹಕ್ಕಿಯ ಕೇಳಿ

ಆಸ್ತಿ ಅಂತಸ್ತಿನ ಮದದಿ ಮೆರೆವುದೇ ಸಾಧನೆಯೇ..?
ಕರುಳಕುಡಿಗಾಗಿ ತೊರೆದ ಆಸೆಗಳೇನೆಂದು ಹೆತ್ತವರ ಕೇಳಿ

ಸಂತ ಪಥ




ಮಾಳಿಗೆಯ ಹಂಗಿರದೆ ನಿಲದೆ ನಡೆದಿಹ ಸಂತ
ಜೋಳಿಗೆಯ ತುಂಬಿಹುದು ಅನುಭಾವ ಬುತ್ತಿ
ನಾಲಿಗೆಯು ನಂಬಿರಲು ಸರ್ವಶಕ್ತನ ಮಂತ್ರ
ಹೋಳಿಗೆಯೂ ತುಂಬದಿಹ ಹಸಿವೆ ಭಕುತಿ

ಹಾಡುಹಕ್ಕಿಗೆ ಏಕೆ ಬಿರುದು ಬಾವಲಿಯೊಲವು
ಬೀದಿಗುನ್ನಿಗೆ ಬೇಕೆ ಮಹಲ ಕಾವಲಿನೊಲವು
ನಾಡಿಯಲಿ ಹರಿಯೆ ದೇವ ನಾಮದ ಭಲವು
ಸೋಲೇನು? ಗೆಲುವೇನು? ಸಮ ನೋವು ನಲಿವು

ಹುಟ್ಟು ಅವನಿಚ್ಛೆ ಸಾವು ಅವನಿಚ್ಛೆ
ನಾನು ನನದೆನಲು ನಡುವೆ ಇನ್ನೇನಿದೆ
ತೊಟ್ಟು ಖಾವಿಯ ತೊರೆದು ಬಂಧಗಳ
ಅವಗೆ ಶರಣೆನದೆ ಗತಿ ಬೇರೇನಿದೆ

ನೀಲ ನಭದಡಿಗೆ ಅವನರಸಿ ಸವೆಸಿರಲು
ಕೊನೆಯೆ ಕಾಣದಿಹ ಜಂಗಮದ ಹಾದಿ
ಕಾಲಗರ್ಭದಿ ಅಳಿದು ನಶಿಸೆ ಸ್ಥಾವರವು
ಆತ್ಮಕಂಟಿಹುದು ಪರಮಾತ್ಮ ಸಂಗಮದ ವ್ಯಾದಿ

ಜಲದ ಸಾಗರ ದಾಟೆ ನೌಕೆ ನೂರಿಹುದಿಲ್ಲಿ
ಭವದ ಸಾಗರ ದಾಟೆ ನೌಕೆಯೊಂದೆ
ತಮದ ಕೂಪಕೆ ಎಳೆವ ಹಲವು ದಾರಿಗಳಿಲ್ಲಿ
ಬೆಳಕ ರೂಪದಿ ಸೆಳೆವ ದೈವವೊಂದೆ

Saturday, 27 July 2019

ನಿರುಪಯೋಗಿ ಕವಿತೆಗಳು

ಬರದಿ ಬಿರಿದ ಬರಡು ಭೂಮಿ ಮೇಲಣ ಅಂಬರ 
ಕನಿಕರದ ಕಂಬನಿ ಸುರಿಸುವದಿಲ್ಲ..
ಹಸಿರ ‌ಹೆಸರು ಮರೆತ ಮರದ ರೆಂಬೆಗಳಲ್ಲಿ
ಹೊಸ ಚೈತ್ರದ ಚಿಗುರು ಕುಡಿಯೊಡೆಯುವದಿಲ್ಲ..
ಈ ಹಾಳು ಕವಿತೆಗಳಿಂದ ಏನೂ ಆಗುವದಿಲ್ಲ...

ಚೆಲ್ಲಿದರು ತರ್ಪಣಕೆ ಎದೆ ಬಗೆದು ನೆತ್ತರನು
ಕಲ್ಲು ದೇವರು ಕಣ್ಣ ತೆರೆಯುವದೆ ಇಲ್ಲ
ಕಣ್ಣುಗಳಲಿ ನೀರ್ಬತ್ತಿ ಹರಿದರೂ ಹನಿ ರಕ್ತವದು
ಮಣ್ಣು ಸೇರಿದ ಪ್ರೀತಿ ಮಾತನಾಡುವದೆ ಇಲ್ಲ...
ಈ ಹಾಳು ಕವಿತೆಗಳಿಂದ ಏನೂ ಆಗುವದಿಲ್ಲ...

ಉಸಿರು ನಿಲ್ಲುವವರೆಗೆ ಗೆಯ್ದರೂ ಕಾಯಕವ
ಹಸಿದ ಹೊಟ್ಟೆಗೆ ಹಿಟ್ಟು ಹುಟ್ಟುವದೆ ಇಲ್ಲ
ಎಡೆಬಿಡದೆ ಎಡೆಎಡೆಯಲಿ ಗುಗ್ಗಳವ ಸುರಿದರೂ
ಒಡೆದ ಕನ್ನಡಿ ಹರಳು ಕೂಡುವದೆ ಇಲ್ಲ
ಈ ಹಾಳು ಕವಿತೆಗಳಿಂದ ಏನೂ ಆಗುವದಿಲ್ಲ..