Sunday 17 July 2011

ಕಲೆ ಒಳ್ಳೆಯದು..!

ಬೇಡ..
ಮುದ್ದೆಯಾಗಿ ಬಿದ್ದುದನ್ನು
ಎತ್ತಿ ಕುಡುಗಿ...
ಅರ್ಧ ಮೇಲೆ ಮಡಿಸಿದ
ಕೈ ಪೂರ್ತಿ ಬಿಡಿಸಿ
ಉಲ್ಟಾ ಮಾಡಿ
ಸಾಬೂನಿನ ಹಾಲ್ನೊರೆ
ನೀರಲ್ಲಿ ದಿನವಿಡೀ ನೆನೆಸಿ
ತಿಕ್ಕಿ ತೊಳೆದು
ನೀರಲ್ಲಿ ಅದ್ದದ್ದಿ ತೆಗೆದು
ಹಿಂಡಿ ತಂತಿ ಮೇಲೆಸೆದು
ಗಾಳಿಗೆ ಹಾರದಂತೆ
ಕ್ಲಿಪ್ಪಿನಿಂದ ಬಂದಿಸುವ ಮೊದಲು
ಒಮ್ಮೆ ಸರಿಯಾಗಿ ನೋಡು...

ನಿನ್ನೆ ರಾತ್ರಿ ನನ್ನನಪ್ಪಿ

ನೀನಿತ್ತ ಮುತ್ತು ಗುರಿ ತಪ್ಪಿ
ಅಂಗಿಯ ಮೇಲೆ
ಕೆಂದುಟಿಯ ಕಲೆ ಮೂಡಿದೆ..

ನೀ ಮತ್ತೆ ಮರಳಿ ಬರುವವರೆಗೆ

ಮುತ್ತ ಹೊತ್ತು ತರುವವರೆಗೆ
ನೋಡಿ ಸಂಭ್ರಮಿಸಬೇಕು ನಾನು...
ನೆನಪ ಮಳೆಯಲಿ ನೆನೆದು
ವಿರಹಾಗ್ನಿ ಸುಡದಂತೆ
ನಿನ್ನ ಕಾಯಬೇಕು ನಾನು..

ಹೊಸ ಅಂಗಿ ಕಲೆಯಾಯ್ತೆಂದು

ಬೇಸರ ಬೇಡ..
ಕಲೆಯಿಂದ ಒಳ್ಳೆಯದಾಗೋದಾದ್ರೆ
ಕಲೆ ಒಳ್ಳೆಯದು..!!

Tuesday 5 July 2011

ನೆನಪಿನ ಯಾತ್ರೆಗೆ

ಅದೋ..
ಇಷ್ಟು ಹೊತ್ತು ಗುಡುಗು ಮಿಂಚಿನ
ಜೊತೆ ತಾಲೀಮು ನಡೆಸಿದ್ದ
ಮಳೆರಾಯ ಬಂದೇ ಬಿಟ್ಟ..
ಚಿಟ ಪಟ.. ಪಟ ಚಿಟ...
ಹನಿಗಳ ಗೆಜ್ಜೆ ನಾದ ಬೇರೆ..
ಮತ್ತು ಮತಿಗೇರಿದಂತೆ
ಕುಣಿದೇ ಬಿಟ್ಟ..

ಆಗಿದ್ದಾಗಲಿ..ಬಿಡಬೇಡ..

ಕತ್ತಿಯಿಂದ ಕಡಿ...
ಹೆರೆಮಣೆಯಲ್ಲಿ ಉದ್ದುದ್ದಗೆ ಸಿಗಿ..
ಕುಡಿವ ಎಣ್ಣೆಯಲ್ಲಿ ಕರಿ..
ಅಚ್ಚ ಖಾರದ ಪುಡಿ ಸ್ವಲ್ಪ ಸೋಕು...
ವ್ಹಾರೆ ವ್ಹಾ...!
ತುಂಬದ ಬಾಯಿಯ ತಿರುಪತಿ ಹುಂಡಿಗೆ..
ಗರಿ ಗರಿ ಹಲಸಿನ ಸಂಡಿಗೆ..

ನೆನಪಿನ ಯಾತ್ರೆಗೆ 
ಮನಸಿನ ಜಾತ್ರೆಗೆ..
ಸಾಕಿಷ್ಟು ತಯಾರಿ..
ಹಾಂ... ಮರೆತೆ.. ಜೊತೆಗೊಂದು ಲೋಟ...
ಬಿಸಿ ಬಿಸಿ ಕಾಫಿ ಬೇಕೇ ಬೇಕು..

Saturday 2 July 2011

ಆ ಬಾಗಿಲುಗಳ ತೆಗೆದುಬಿಡು..!!


 


ಇಷ್ಟದ ಬಣ್ಣವೇನೋ ಹೌದು..
ಆದರೆಷ್ಟು ದಿನ..?
ಜೇಡ ಕಟ್ಟಿದ.. ಬಣ್ಣ ಮಾಸಿದ..
ಅದೇ ನಾಲ್ಕು ಗೋಡೆಯನ್ನು
ತದೇಕಚಿತ್ತದಿಂದ ನೋಡುವುದು...?

ಹಾಡು ಕುಣಿತ ಆಟ ಓಟ
ಅತ್ತೆ ಸೊಸೆ ಕಾದಾಟ
ಸುದ್ದಿ ವಾಹಿನಿಗಳ ದೊಂಬರಾಟ...
ಬದಬದಲಿಸಿ ಚಾನಲ್ಲು
ದೂರದರ್ಶನದೆದುರು ಹೊತ್ತು ದೂಡುವುದು..?

ಹೊರಗೆ ಗ್ಯಾಲರಿಯಲ್ಲಿ
ವಿಂಡ್ ಚೈಮ್ ನುಡಿಸುತಿರುವ
ತಣ್ಣನೆಯ ಗಾಳಿ ಒಳ ತೂರಬಹುದು...
ಕವಿದ ಮಬ್ಬು ಸರಿಯುವಂತೆ
ಸೂರ್ಯನ ಪುಗಸಟ್ಟೆ ಬೆಳಕು ಒಳ ಚಿಮ್ಮಬಹುದು...
ದಾರಿಯಲ್ಲಿ ಹೋಗುವ ವಾಹನಗಳ ಸದ್ದು
ಪಾರ್ಕಿನಲ್ಲಿ ನಲಿವ ಮಕ್ಕಳ ಕೇಕೆ
ಕಿವಿಗೆ ಅಪ್ಪಳಿಸಲೂ ಬಹುದು..
ರಾತ್ರಿಯ ಸಿ ಎಫ್ ಎಲ್ ಬೆಳಕಿನ ಮೋಹದಿ
ಒಂದೆರಡು ಹುಳ ಹಪ್ಪಡೆ ಹಾರಿ ಬರಬಹುದು..
 ಮೊದಲ ಮಳೆಗೆ ಹರಡಿದ ಮಣ್ಣಿನ ಕಂಪು
ಮೂಗಿಗೆ ಬಡಿದರೂ ಆಶ್ಚರ್ಯವಿಲ್ಲ..
ಮತ್ತೆ ಯೋಚನೆ ಬೇಡ...ಆಗಿದ್ದಾಗಲಿ.. 
ಆ ಕಿಡಕಿಯ ಎರಡು ಬಾಗಿಲುಗಳನ್ನು ತೆಗೆದುಬಿಡು...